ಪೊನ್ನಂಪೇಟೆ: ಕಳೆದ ಐದು ದಶಕಗಳಿಂದ ಕರಾಟೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ಅವರಿಗೆ ವಿಶ್ವ ಶಿಟಾರಿಯೋ ಕರಾಟೆ ಒಕ್ಕೂಟದ ವತಿಯಿಂದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿಂಗಾಪುರದಲ್ಲಿ ನಡೆದ ಶಿಟಾರಿಯೋ ಕರಾಟೆ ಸಂಸ್ಥೆಯ 58ನೇ ವಾರ್ಷಿಕೋತ್ಸವದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಈ ಗೌರವವನ್ನು ಸ್ವೀಕರಿಸಿದರು.
ಶಿಟಾರಿಯೋ ಕರಾಟೆ ಶೈಲಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲಿಯೂ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅರುಣ್ ಮಾಚಯ್ಯ ಅವರು ಇದನ್ನು ಮುಂದಿನ ಪೀಳಿಗೆ ಮುಂದುವರಿಸುವಂತೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಿಟಾರಿಯೋ ಕ್ಷೇತ್ರದಲ್ಲಿ ಅರುಣ್ ಮಾಚಯ್ಯ ಅವರ ಬದ್ಧತೆ ಮತ್ತು ನಿಷ್ಠೆಗೆ ಎಂದಿಗೂ ಬೆಲೆ ಕಲ್ಪಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ವಿವರಿಸಲಾಗಿದೆ.
ಜಗತ್ತಿನ 70 ರಾಷ್ಟ್ರಗಳು ಪಾಲ್ಗೊಂಡಿದ್ದ ಲಂಡನ್ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಇತ್ತೀಚಿಗೆ ಪಾಲ್ಗೊಂಡಿದ್ದ ಅರುಣ್ ಮಾಚಯ್ಯ ಅವರು ಭಾರತ ತಂಡಕ್ಕೆ ಆಯ್ಕೆಗೊಂಡಿರುವ 70 ಕರಾಟೆಪಟುಗಳ ತಂಡದ ನಾಯಕತ್ವ ವಹಿಸಿದ್ದರು.
ಅಖಿಲ ಭಾರತ ಶಿಟಾರಿಯೋ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರಾಗಿ, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಿರಿಯ ಉಪಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಅಂತರಾಷ್ಟ್ರೀಯ ಕರಾಟೆ ತೀರ್ಪುಗಾರರಾಗಿದ್ದಾರೆ. ಕರಾಟೆಯಲ್ಲಿ 8ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವೀಧರಾಗಿರುವ ಅರುಣ್ ಮಾಚಯ್ಯನವರು ಈ ಹಿಂದೆ ವಿಶ್ವದ ಹಲವೆಡೆ ನಡೆದ ಹಲವಾರು ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.