ಮಡಿಕೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೊಡಗಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಕ್ಕೆ ಮದ್ಯ ಸರಬರಾಜು ಮಾಡಲುದ್ದೇಶಿಸಿದರೆ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿರುವ ಅವರು ಸಮಾರಂಭಗಳಿಗೆ ಮದ್ಯವನ್ನು ಸೇರಿಸದಿದ್ದರೆ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಗೃಹಪ್ರವೇಶ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ ಮದ್ಯಪಾನ ಕಾರ್ಯಕ್ರಮದಲ್ಲಿ ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಊರ ಹಬ್ಬ, ದೇವಾಲಯ ವಾರ್ಷಿಕೋತ್ಸವ, ಅನುಮತಿಯ ಬದಲು ಕಡ್ಡಾಯವಾಗಿ ಮಾಹಿತಿಯನ್ನು ತಾಲೂಕು ದಂಡಾಧಿಕಾರಿಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಳ್ಳಬಾರದು. ಜಮ್ಮಾ ಹಿಡುವಳಿದಾರರು ಕೋವಿಯನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿಲ್ಲ ಒಂದೊಮ್ಮೆ ಐದು ವರ್ಷ ಕ್ರಿಮಿನಲ್ ಪ್ರಕರಣದಲ್ಲಿ ಜೈಲುವಾಸ ಸೇರಿದ್ದರೆ ಕೋವಿಯನ್ನು ಸಮೀಪದ ಠಾಣೆಗೆ ಠೇವಣಿ ಇಡಬೇಕು.
ಲೈಸನ್ಸ್ ಹೊಂದಿರುವವರು ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಠೇವಣಿ ಇಡಬೇಕು. ಒಂದೊಮ್ಮೆ ಕಾಡುಪ್ರಾಣಿಗಳ ಉಪಟಳ ಮತ್ತಿತರ ಅತ್ಯವಶ್ಯಕ ಕಾರಣಕ್ಕಾಗಿ ಕೋವಿಯ ಅವಶ್ಯಕತೆ ಇದ್ದರೆ ಪೊಲೀಸ್ ಠಾಣೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬಹುದಾಗಿದೆ.
ಕೊಡಗು ಜಿಲ್ಲೆಯ ಎಲ್ಲ ಗಡಿ ಭಾಗದಲ್ಲಿ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣಾ ದಿನದ 24 ಗಂಟೆ ನಡೆಸಲಾಗುವುದು. ದಾಖಲಾತಿ ಇಲ್ಲದ ಹಣ ಮತ್ತು ವಸ್ತುಗಳನ್ನು ಸಾಗಿಸುವಂತಿಲ್ಲ ಒಟ್ಟಿನಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.