ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಕಂದಾಯ ಸಚಿವ ಆರ್.ಅಶೋಕ್ ಸಂಭವಿಸುತ್ತಿರುವ ಭೂಕಂಪದಿಂದ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
ಇಲ್ಲಿ ಸಣ್ಣ ಪ್ರಮಾಣದ ಭೂಕಂಪನ ಆಗುತ್ತಿದೆ ಅಷ್ಟೇ. ಇದುವರೆಗೂ ಬಿರುಕು ಕೂಡ ಮೂಡಿಲ್ಲ ಎಂದರು. ಸರ್ಕಾರ ಭೂಕಂಪನವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಭೂಮಿಯಲ್ಲಿ ಬಿರುಕು ಮೂಡಿದರಷ್ಟೆ ಅನಾಹುತ ಅಂತ ತಿಳಿದುಬಂದಿದೆ. ಹೈದರಾಬಾದಿನಿಂದ ಭೂಗರ್ಭ ಶಾಸ್ತ್ರಜ್ಞರು ಕೂಡ ಬಂದಿದ್ದಾರೆ. ನಾಳೆ ವಿಜ್ಞಾನಿಗಳು ನಮಗೆ ವರದಿ ನೀಡುತ್ತಾರೆ. ಕೊಡಗಿನ ಜನ ಆತಂಕಪಡುವ ಅಗತ್ಯವಿಲ್ಲ ಎಂದರು.
ಸಂಪೂರ್ಣ ಮನೆ ಹಾನಿಯಾದವರಿಗೆ ₹ 5 ಲಕ್ಷ, ಭಾಗಶಃ ಹಾನಿಯಾದವರಿಗೆ ₹ 50 ಸಾವಿರ, ನೀರು ನುಗ್ಗಿದ ಮನೆಗಳಿಗೆ ₹ 10 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.