ಮಡಿಕೇರಿ: ಕೊಡಗಿನಲ್ಲಿ ನಿಧಾನಗತಿಯಲ್ಲಿ ಮುಂಗಾರು ಚೇತರಿಕೆ ಕಾಣಿಸುತ್ತಿದೆ. ಆದರೆ ಮಳೆ ಪ್ರಮಾಣ ತೀರ ಕಡಿಮೆಯಾಗಿರುವುದು ಆತಂಕ ಹುಟ್ಟಿಸಿದೆ. ಈಗ ಆರಂಭವಾಗಿರುವ ಮಳೆ ಮುಂದಿನ ದಿನಗಳಲ್ಲಿ ಬಿರುಸುಪಡೆದುಕೊಂಡರೆ ಜನ ನೆಮ್ಮದಿಯುಸಿರು ಬಿಡಬಹುದು ಇಲ್ಲದೆ ಹೋದರೆ ಸಂಕಷ್ಟ ತಪ್ಪಿದಲ್ಲ.
ಮುಂಗಾರು ಇಷ್ಟರಲ್ಲೇ ಬಿರುಸಾಗಿ ಜಿಲ್ಲೆಯಲ್ಲಿರುವ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಬೇಕಾಗಿತ್ತು. ಆದರೆ ಈ ವರ್ಷ ಅದ್ಯಾವುದೂ ಆಗಲೇ ಇಲ್ಲ. ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ ಕಾಣಲೇ ಇಲ್ಲ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ತನಕ ಜಿಲ್ಲೆಯ ಜನ ಮಳೆಯಿಂದ ಉಂಟಾಗುವ ಪ್ರವಾಹ, ಭೂಕುಸಿತಕ್ಕೆ ಭಯಪಡುತ್ತಿದ್ದರು. ಆದರೆ ಈ ಬಾರಿ ಮಳೆ ಬಂದಿಲ್ಲವಲ್ಲ ಎಂದು ಭಯಪಡುವಂತಾಗಿದೆ.
ಇಷ್ಟಕ್ಕೂ ಕೊಡಗಿನಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ ? ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಹೇಗಿದೆ ? ಎಂಬುದನ್ನು ನೋಡಿದ್ದೇ ಆದರೆ ಅಚ್ಚರಿ ಮೂಡುತ್ತದೆ. ಸದ್ಯ ಮುಂಗಾರು ಚೇತರಿಕೆಯಾಗುತ್ತಿರುವಂತೆ ಕಾಣಿಸುತ್ತಿದೆ. ಇದು ಜನರಲ್ಲಿ ಆಶಾಭಾವನೆ ಮೂಡಿಸುತ್ತಿದೆ. ಹಾಗಾದರೆ ಕೊಡಗಿನಲ್ಲಿ ಜಿಲ್ಲಾವಾರು, ತಾಲೂಕು, ಹೋಬಳಿವಾರು ಮಳೆಯ ಪ್ರಮಾಣ ಹೇಗಿದೆ ಎಂಬುದನ್ನು ನೋಡುತ್ತಾ ಹೋದರೆ ಕಳೆದ ವರ್ಷಕ್ಕಿಂತ ತೀರಾ ಕಡಿಮೆಯಾಗಿರುವುದು ಬೇಸರದ ಸಂಗತಿಯಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ ತೀರಾ ಕಡಿಮೆಯಿರುವುದು ಗೋಚರಿಸಿದೆ. ಇದು ಆತಂಕಕಾರಿಯೂ ಹೌದು. ಮುಂದಿನ ದಿನಗಳಲ್ಲಿ ಮುಂಗಾರು ಚೇತರಿಕೆಯಾಗಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.