ಮಡಿಕೇರಿ,ಜು.12: ಕಾವೇರಿ ನದಿ ಹಾಗೂ ಕೊಡವ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ ರವಾನಿಸಿದ ಪ್ರಕರಣ ಖಂಡನೀಯವೆಂದು ತಿಳಿಸಿರುವ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬ ಕಾವೇರಿ ನದಿ ಹಾಗೂ ಕೊಡವ ಮಹಿಳೆಯರ ಕುರಿತು ಅವಹೇಳನ ಮಾಡಿರುವುದು ಖಂಡನೀಯ. ಇದು ಕೋಮು ಭಾವನೆಯನ್ನು ಕೆರಳಿಸಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಪೂರ್ವ ಯೋಜಿತ ಷಡ್ಯಂತ್ರದಂತೆ ಕಂಡು ಬರುತ್ತಿದೆ. ಯಾವುದೇ ಧರ್ಮಕ್ಕೆ ಸೇರಿದ ಆಚಾರ, ವಿಚಾರಗಳಿರಲಿ, ಅದು ಆಯಾ ಧರ್ಮದವರಿಗೆ ಶ್ರೇಷ್ಠ ನಂಬಿಕೆಯಾಗಿರುತ್ತದೆ. ಈ ನಂಬಿಕೆಗೆ ದಕ್ಕೆಯಾದಾಗ ಯಾರೂ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕೊಡವರ ಭಾವನೆಗೆ ನೋವುಂಟು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಧಾರ್ಮಿಕ ಭಾವನೆಯನ್ನು ಕೆರಳಿಸಿ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕು ಮತ್ತು ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಆದಷ್ಟು ಶೀಘ್ರ ಸತ್ಯ ಏನು ಎನ್ನುವುದನ್ನು ಪೊಲೀಸ್ ಇಲಾಖೆ ಜನರ ಮುಂದಿಡಬೇಕು. ನೈಜಾಂಶ ಬಯಲಾಗುವವರೆಗೆ ಯಾರೂ ಅಮಾಯಕರ ವಿರುದ್ಧ ಅಪಪ್ರಚಾರ ಮಾಡಬಾರದು ಎಂದು ಯಾಕುಬ್ ಹಾಗೂ ಹಂಸ ಮನವಿ ಮಾಡಿದ್ದಾರೆ.