ಮಡಿಕೇರಿ: ಕರಿಮೆಣಸಿಗೆ ಉತ್ತಮ ಬೆಲೆ ದೊರೆಯುತ್ತಿರುವ ಈ ಸಮಯದಲ್ಲಿ ಫಸಲು ನೀಡುತ್ತಿದ್ದ ಬಳ್ಳಿಗಳನ್ನು ಕಡಿದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ಮಾಲ್ದಾರೆಯಲ್ಲಿ ನಡೆದಿದೆ.
ಮೂರ್ನಾಲ್ಕು ದಶಕಗಳನ್ನು ಕಂಡಿದ್ದ ಕರಿಮೆಣಸು ಬಳ್ಳಿಗಳು ಹೆಮ್ಮರಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದು ಫಸಲು ನೀಡುತ್ತಿದ್ದವು. ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದ ಬಳ್ಳಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಬಳ್ಳಿಯಲ್ಲಿ ಫಸಲಿದ್ದು ಇನ್ನಷ್ಟೆ ಕೊಯ್ಲು ಮಾಡಬೇಕಾಗಿತ್ತು. ಆದರೆ ಕೊಯ್ಲುಗೆ ಮುನ್ನವೇ ಅಟ್ಟಹಾಸ ಮೆರೆದಿದ್ದಾರೆ.
ಈ ಘಟನೆಯಿಂದ ತೋಟದ ಮಾಲೀಕ ಪಟ್ಟಡ ಸಚ್ಚಿನ್ ಸುಬ್ಬಯ್ಯ ಲಕ್ಷಾಂತರ ರೂ.ಗಳನ್ನು ಕಳೆದು ಕೊಂಡಿದ್ದಾರೆ. ಮಾಲೀಕರು ಹೇಳುವಂತೆ ಮಾಲ್ದಾರೆ ಸಿದ್ದಾಪುರದಲ್ಲಿ ರುವ ತೋಟದಲ್ಲಿ 20 ರಿಂದ 40 ವರ್ಷದ ಸುಮಾರು 50 ರಿಂದ 60 ಒಳ್ಳೆ ಮೆಣಸು ಬಳ್ಳಿಗಳನ್ನು ಯಾರೋ ದುಷ್ಕರ್ಮಿಗಳು ಬುಡವನ್ನು ಕಡಿದು ಹಾಕಿ ನಾಶಪಡಿಸಿದ್ದು, ಇದೀಗ ಗಿಡಗಳೆಲ್ಲವೂ ಒಣಗಿದ್ದು ಇದರ ಮಾಲೀಕರು ಕಂಗಾಲಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ .