ಮಡಿಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಿ ನೌಕರರ ಸಂಘಗಳು ಮಾ.28 ಮತ್ತು 29 ರಂದು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲೂ ವಿವಿಧ ಸಂಘಟನೆಗಳಿಂದ ಮುಷ್ಕರ ನಡೆಲಾಗುವುದೆಂದು ಜೆಸಿಎ ಹಾಗೂ ಎಐಪಿಇಯು ಅಧ್ಯಕ್ಷ ಎಂ.ಕೆ.ಮೋಹನ್ ಮತ್ತು ಕಾರ್ಯದರ್ಶಿ ಎಂ.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯ ಮೂಲಕ ಈ ವಿಷಯ ತಿಳಿಸಿರುವ ಅವರು, ಅಖಿಲ ಭಾರತ ಅಂಚೆ ನೌಕರರ ಸಂಘ, ರಾಷ್ಟ್ರೀಯ ಅಂಚೆ ನೌಕರರ ಸಂಘ, ರಾಷ್ಟ್ರೀಯ ಅಂಚೆ ಗ್ರಾಮೀಣ ನೌಕರರ ಸಂಘ ಕೊಡಗು ವಿಭಾಗದ ಸಂಘಟನೆಗಳು ಸೇರಿ ಸಮನ್ವಯ ಸಮಿತಿಯನ್ನು ರಚಿಸಿಕೊಂಡು ಎರಡು ದಿನದ ಮುಷ್ಕರದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದು, ಮಾ.28 ರಂದು ಬೆಳಗ್ಗೆ 9.30ಕ್ಕೆ ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಡೆಯಲಿರುವ ಮುಷ್ಕರಕ್ಕೆ ಎಲ್ಲಾ ನೌಕರರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಬೇಡಿಕೆಗಳು: ಹೊಸ ಪಿಂಚಣಿ (ಎನ್ಪಿಎಸ್) ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಜಿಡಿಎಸ್ ನೌಕರರಿಗೆ ಕೇಂದ್ರ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಜಾರಿಗೊಳಿಸಬೇಕು ಹಾಗೂ ಕಮಲೇಶ್ ಚಂದ್ರ ವರದಿಯ ಶಿಪಾರಸ್ಸು ಅನುಷ್ಠಾನಗೊಳಿಸಬೇಕು, ಕನಿಷ್ಟ ವೇತನಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಲ್ಲಿ ನೀಡಿದ ಆಶ್ವಾಸನೆಯನ್ನು ಜಾರಿಗೊಳಿಸಬೇಕು, ವಾರದಲ್ಲಿ 5 ದಿನಗಳನ್ನು ಕರ್ತವ್ಯದ ದಿನವಾಗಿ ಪರಿಣಿಸಬೇಕು, ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಬಾರದು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು, ಶೇ.100 ರಷ್ಟು ಅನುಕಂಪ ಆಧಾರಿತ ನೇಮಕ ಮಾಡುವುದು, ಸಿಎಸ್ಐ, ಸಿಬಿಎಸ್, ಆರ್ ಐಸಿಟಿ, ಎಸ್ಐಎಫ್ವೈ ತಂತ್ರಜ್ಞಾನಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸುವುದು, ಐಪಿಪಿಬಿ ಹಾಗೂ ಎಇಪಿಎಸ್ ಗಳ ಅವೈಜ್ಞಾನಿಕ ಗುರಿಗಳನ್ನು ನೀಡಿ ನೌಕರರಿಗೆ ಕಿರುಕುಳ ನೀಡಬಾರದು, ಕೋವಿಡ್ನಿಂದ ಮೃತರಾದ ನೌಕರರ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡಬೇಕೆಂದು ಮುಷ್ಕರದ ಸಂದರ್ಭ ಒತ್ತಾಯಿಸಲಾಗುವುದೆಂದು ಅವರು ಹೇಳಿದ್ದಾರೆ.