ಮಡಿಕೇರಿ ; ಜಿಲ್ಲೆಯ ಜೀವನಾಡಿ ಆಗಿರುವ ಕಾಫಿಯ ಶೇಕಡಾ 70 ರಷ್ಟು ಉತ್ಪಾದನೆ ವಿದೇಶಕ್ಕೆ ರಫ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಹಾರ
ಪದಾರ್ಥಗಳಲ್ಲಿ ರಸಾಯನಿಕಗಳ ಬಳಕೆ ಹೆಚ್ಚಾಗುತ್ತಿರುವಂತೆ ಬಳಕೆದಾರರು ಸಾವಯವ ಉತ್ಪನ್ನಗಳ ಮೊರೆ ಹೋಗುತಿದ್ದಾರೆ.
ಆದರೆ ತೊಂದರೆ ಕೊಡುವ ಕ್ರಿಮಿ ಕೀಟಗಳ ಕಾಟದಿಂದಾಗಿ ಬೆಳೆಗಾರರು ರಸಾಯನಿಕಗಳ ಬಳಕೆ ಮಾಡುವುದು ಅನಿವಾರ್ಯ ಆಗಿದೆ. ಅಮೇರಿಕಾ ಸೇರಿದಂತೆ ಬಹುತೇಕ ಮುಂದುವರಿದ ರಾಷ್ಟ್ರಗಳು ಆಹಾರ ಪದಾರ್ಥಗಳಿಲ್ಲಿ ರಸಾಯನಿಕ ಇರಬಹುದಾದ ಪ್ರಮಾಣವನ್ನು ನಿಗದಿಪಡಿಸಿವೆ ಮತ್ತು ನಿಗದಿತ ಪ್ರಮಾಣಕ್ಕಿಂತ ಮೀರಿದ ಆಹಾರ ಪದಾರ್ಥವನ್ನು ಮಾನವ ಸೇವನೆಗೆ ಅನರ್ಹ ಎಂದು ಪರಿಗಣಿಸಿ ತಿರಸ್ಕರಿಸಲಾಗುತ್ತದೆ. ಈ ದೇಶಗಳು ಕಟ್ಟು ನಿಟ್ಟಿನ ಗುಣ ಮಟ್ಟ ಪರೀಕ್ಷೆಯನ್ನೂ ಹೊಂದಿವೆ.
ಕಾಫಿಯಲ್ಲಿ ಮುಖ್ಯವಾಗಿ ಮಿಥೈಲ್ ಪ್ಯಾರಾಥಿಯಾನ್ (Methyl Parathyion ) ಎಂಡೋಸಲ್ಫಾನ್ (Endosulfan) ಮತ್ತು ಕ್ಲೋರೋಫೈರಿಫಾಸ್ (Chlorpyrifos ) ಎಂಬ ರಸಾಯನಿಕಗಳು ಇರುತ್ತವೆ.
ಇದರಲ್ಲಿ ಮೊದಲಿನ ಎರಡು ರಸಾಯನಿಕಗಳ ಬಳಕೆ ದೇಶದಲ್ಲಿ ಇಲ್ಲ,ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಳಕೆಯಿಂದಾಗಿ ನೂರಾರು ಜನರು ಸಂತ್ರಸ್ಥರಾದರು. ಪ್ರಕರಣದ ಗಂಭೀರತೆ ಅರಿತ ಕೇಂದ್ರ ಸರ್ಕಾರ ಎಂಡೋಸಲ್ಫಾನ್ ನ್ನುಸಂಪೂರ್ಣ ನಿಷೇಧ ಮಾಡಿದೆ. ದೇಶದಲ್ಲಿ ಕಾಂಡ ಕೊರಕ ಹುಳುಗಳ ನಿಯಂತ್ರಣಕ್ಕೆ ವ್ಯಾಪಕವಾಗಿ ಕ್ಲೋರೋಫೈರಿಫಾಸ್ ರಸಾಯನಿಕವನ್ನು ಬಳಸಲಾಗುತ್ತಿದೆ. ಭಾರತದಿಂದರಫ್ತಾಗುವ ಕಾಫಿಯಲ್ಲಿ ಕ್ಲೋರೋಪೈರಿಫಾಸ್ ಅಂಶ ಹೆಚ್ಚಾಗಿದೆ ಎಂದು ಯೂರೋಪಿಯನ್ ರಾಷ್ಟ್ರಗಳು ಆಕ್ಷೇಪ ಎತ್ತಿವೆ. ಅಲ್ಲದೆ ಇದು ಹೀಗೆ ಮುಂದುವರಿದರೆ ಭಾರತದಿಂದ ಆಮದು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಭಾರತದಲ್ಲಿ ಉತ್ಪಾದನೆ ಆಗುವ ಶೇಕಡಾ 70 ರಷ್ಟು ಕಾಫಿಯು ರಫ್ತನ್ನೇ ಅವಲಂಬಿಸಿರುವುದರಿಂದ ಗುಣಮಟ್ಟ ಕಾಯ್ದುಕೊಳ್ಳುವುದು ಅನಿವಾರ್ಯವೇ ಆಗಿದೆ.
ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಈ ಹಿಂದೆ ಒಂದು ಕೆಜಿ ಕಾಫಿಯಲ್ಲಿ ಇರಬಹುದಾದ ಗರಿಷ್ಟ ಪ್ರಮಾಣದ ರಸಾಯನಿಕ .20 ಮಿಲಿಗ್ರಾಂ ಎಂದು ನಿಗದಿಪಡಿಸಿದ್ದವು. 6 ತಿಂಗಳ ಹಿಂದೆ ಅದನ್ನು ಪರಿಷ್ಕರಿಸಿ .01 (point zero one) ಗೆ ನಿಗದಿಪಡಿಸಿವೆ ಎಂದು ತಿಳಿದು ಬಂದಿದೆ. ವಿಶ್ವದ ಕಾಫಿ ಬೆಳೆಯುವ ಬಹುತೇಕ ರಾಷ್ಟ್ರಗಳಲ್ಲಿ ವರ್ಷ ವರ್ಷ ರಸಾಯನಿಕ ಬಳಕೆ ಕಡಿಮೆ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ರಸಾಯನಿಕಗಳ ಬಳಕೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಕಡಿಮೆ ಆಗುತ್ತಿಲ್ಲ. ಅಂತಿಮವಾಗಿ ಇದರಿಂದ ಕಾಫಿ ರಫ್ತಿಗೆ ಹೊಡೆತ ಬೀಳಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿಯ ಕಾಫಿ ಮಂಡಳಿ ಉಪ ನಿರ್ದೇಶಕ ಬಿ ಶಿವಕುಮಾರ ಸ್ವಾಮಿ ಅವರು ರಸಾಯನಿಕಗಳ ಕಾರಣದಿಂದ ಭಾರತದ ಕಾಫಿಗೆ ಯೂರೋಪ್ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದರೆ ಸಹಜವಾಗೇ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಬೆಲೆಯು ಗಣನೀಯವಾಗಿ ಕುಸಿಯಲಿದೆ. ಇದನ್ನು ತಡೆಯಲೆಂದೇ ಕಾಫಿ ಮಂಡಳಿಯು ಮುನ್ನೆಚ್ಚರಿಕಾ ಕ್ರಮವಾಗಿ ಬೆಳೆಗಾರರಿಗೆ ಕ್ಲೋರೋಫೈರಿಫಾಸ್ ಬಳಕೆಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಿದ್ದು ಕಾಂಡಕೊರಕ ಹುಳುಗಳ ಪರಿಣಾಮಕಾರಿ ನಿಯಂತ್ರಣಕ್ಕೆ ಸೂಚನೆಗಳನ್ನೂ ನೀಡಿದೆ ಎಂದರು.
ಒಂದು ವೇಳೆ ದೇಶದ ಕಾಫಿಯನ್ನು ಯೂರೋಪಿಯನ್ ರಾಷ್ಟ್ರಗಳು ಅಹಾರ ಸುರಕ್ಷತಾ ಗುಣಮಟ್ಟದ ಕಾರಣ ನೀಡಿ ತಿರಸ್ಕರಿಸಿದರೆ ಅದರ ಲಾಭ ಸಂಪೂರ್ಣವಾಗಿ ಬ್ರೆಜಿಲ್ ಗೆ ಆಗಲಿದೆ. ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿರುವ ಬ್ರೆಜಿಲ್ನಲ್ಲಿ ಹಿಮಪಾತದ ಕಾರಣದಿಂದ ಶೇ 10 ರಷ್ಟು ಆರೇಬಿಕಾ ಕಾಫಿ ಉತ್ಪಾದನೆ ನಾಶವಾಗಿದೆ. ಇದೇ ಕಾರಣದಿಂದಲೇ ದೇಶದಲ್ಲಿ ಅರೇಬಿಕಾ ಕಾಫಿ ಬೆಲೆ ಗರಿಷ್ಟ ಮಟ್ಟ ತಲುಪಿದೆ. ಬೆಳೆಗಾರರು ಗುಣಮಟ್ಟ
ಕಾಯ್ದುಕೊಳ್ಳದಿದ್ದರೆ ಬೇಡಿಕೆ ಕುಸಿದು ಬೆಲೆಯು ಪಾತಾಳಕ್ಕಿಳಿಯಲಿದ್ದು ಬೆಳೆಗಾರರು ಮುನ್ನೆಚ್ಚರಿಕೆ ವಹಿಸಬೇಕಿದೆ.