ಮೈಸೂರು: ಅರಣ್ಯ ಪ್ರದೇಶದ ಸಿಬ್ಬಂದಿಗಳ ಎಡವಟ್ಟಿಗೆ ಜೆಸಿಬಿ ಯಂತ್ರ ಸುಟ್ಟು ಭಸ್ಮವಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದ ಚೈನ್ ಗೇಟ್ ಬಳಿ ಘಟನೆ ನಡೆದಿದೆ.
ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದೆ. ಆನೆಕಂದಕ ಕಾಮಗಾರಿ ನಡೆಸಲು ಜೆಸಿಬಿ ಯಂತ್ರ ಬಳಸಲಾಗುತ್ತಿತ್ತು. ಅನಾರೋಗ್ಯದ ನಿಮಿತ್ತ ಜೆಸಿಬಿ ಚಾಲಕ ಆಸ್ಪತ್ರೆಗೆ ತೆರಳಿದ್ದರೆಂದು ಹೇಳಲಾಗಿದೆ.
ಈ ವೇಳೆ ಕುರುಚಲು ಸಸ್ಯಗಳ ನಿರ್ಮೂಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ಹಚ್ಚಿದ್ದಾರೆ. ಕುರುಚಲು ಸಸ್ಯಗಳಿಂದ ಪಸರಿಸಿದ ಬೆಂಕಿ ಸಮೀಪದಲ್ಲಿದ್ದ ಜೆಸಿಬಿ ಯಂತ್ರಕ್ಕೂ ತಗುಲಿದೆ. ಕೆಲವೇ ಸಮಯದಲ್ಲಿ ಜೆಸಿಬಿ ಯಂತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರುಕಲಾಗಿದೆ.
ಅರಣ್ಯ ಪ್ರದೇಶ ಪ್ರವೇಶಕ್ಕೆ ನಿರ್ಭಂದ ಹೇರಿರುವ ಕಾರಣ ಸ್ಥಳಕ್ಕೆ ತುರ್ತು ಅಗ್ನಿಶಾಮಕ ವಾಹನ ಸಹ ತಲುಪಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಎಡವಟ್ಟಿಗೆ ಜೆಸಿಬಿ ಯಂತ್ರ ಸುಟ್ಟು ಕರಕಲಾಗಿದೆ.