ಹಾಸನ: ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಯಿಂದ ಜನರಿಗೆ ಯಾವುದೇ ಸಹಕಾರ ಆಗಲಿಲ್ಲ. ಪ್ರತಿ ವಸ್ತುವಿನ ಮೇಲೆ ತೆರಿಗೆ ಹಾಕಿ ಕೆಟ್ಟ ಸ್ಥಿತಿಗೆ ತಂದ ಸರ್ಕಾರ ಇದ್ದರೆ ಅದು ಮೋದಿ ನೇತೃತ್ವದ ಸರ್ಕಾರ ಮಾತ್ರ. ಹತ್ತು ವರ್ಷಗಳ ಅವರ ಆಡಳಿತದ ಕನಸು ಇಲ್ಲಿಗೆ ಮುಕ್ತಾಯವಾಗುತ್ತದೆ ಎಂದು ಕೃಷಿ ಸಚಿವ ಚೆಲುವ ನಾರಾಯಣಸ್ವಾಮಿ ಹೇಳಿದರು.
ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೋದಿ ಬಿಟ್ಟು ಬೇರೆಯವರ ಹೆಸರು ಹೇಳಿದರೆ ಸುಟ್ಟು ಹೋಗುತ್ತಾರೆ. ಅದೇ ಕಾರಣಕ್ಕೆ ಅವರಲ್ಲಿ ಡಿಕ್ಟೇಟರ್ ಶಿಫ್ ಇದೆ. ನಮ್ಮ ಪಕ್ಷದಲ್ಲಿ ಆ ಸಂಪ್ರದಾಯವಿಲ್ಲ. ಈ ಚುನಾವಣೆ ಏನಾಗಬಹುದು ಎಂದು ದೇಶ ನೋಡುತ್ತಿದೆ. ನಮ್ಮ ರಾಜ್ಯದ ತೆರಿಗೆ ಹಣ ಪಡೆದು ಅನುದಾನ ನೀಡದೇ ವಂಚಿಸಿದ್ದಾರೆ. ಈಗ ಅವರಿಗೆ ಮತ ಕೇಳುವ ನೈತಿಕತೆ ಇಲ್ಲವಾಗಿದೆ. ರಾಜ್ಯದ ಜನರು ಬಿಜೆಪಿ-ಜೆಡಿಎಸ್ನವರಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಡಿಕ್ಟೇಟರ್ ಶಿಫ್ ಇಲ್ಲ. ರಾಹುಲ್ಗಾಂಧಿ ಪ್ರಧಾನಿ ಆಗುವುದಾದರೆ ಹಿಂದೆಯೇ ಆಗುತ್ತಿದ್ದರು. ಅವರಿಗೆ ಅದು ಮುಖ್ಯ ಅಲ್ಲ, ನಮ್ಮ ಪಕ್ಷಕ್ಕೆ ರಾಷ್ಟ್ರದ ಜನರ ಬದುಕು ಮುಖ್ಯ. ಖರ್ಗೆ, ರಾಹುಲ್ಗಾಂಧಿ ಯಾರು ಬೇಕಾದರೂ ಆಗಬಹುದು. ನಮ್ಮಲ್ಲಿ ಹದಿನೈದು ಮಂದಿ ಸಮರ್ಥರಿದ್ದಾರೆ, ಯೋಚನೆ ಏಕೆ ಮಾಡಬೇಕು ಎಂದರು.
ಒಂದು ಕುಟುಂಬಕ್ಕೆ ಎಷ್ಟು ಬಾರಿ ಅಧಿಕಾರ ಕೊಡಲು ಸಾಧ್ಯ ಎನ್ನುವುದನ್ನು ಜನ ಆಲೋಚಿಸಿ ಒಳ್ಳೆಯ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಏನಾದರೂ ಆರ್ಭಟ ಮಾಡಲಿ. ಶ್ರೇಯಸ್ ಪಟೇಲ್ಗೆ ಹಾಕುವ ಒಂದೊಂದು ಮತಗಳು ಅವರಿಗೆ ತಕ್ಕ ಉತ್ತರ ಕೊಡಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಆ ಮೂಲಕ ಮತ್ತಷ್ಟು ಶಕ್ತಿ ಬರಬೇಕು. ಮಂಡ್ಯ, ಹಾಸನ ಎರಡನ್ನು ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಬಾರಿಯ ಫಲಿತಾಂಶ ಜನತದಳ ಹಾಗೂ ಬಿಜೆಪಿಗೆ ದೊಡ್ಡ ಶಾಕ್ ನೀಡುತ್ತದೆ. ಇಲ್ಲಿ ಹೇಗೆ ಶ್ರೇಯಸ್ ಪಟೇಲ್ ಗೆಲ್ಲಿಸಬೇಕು ಎಂದು ಜನ ಅಂದುಕೊಂಡಿದ್ದಾರೋ, ಅಂತೆಯೇ ಮಂಡ್ಯದಲ್ಲೂ ಸ್ಟಾರ್ ಚಂದ್ರು ಗೆಲ್ಲಿಸಬೇಕು ಅಂದುಕೊಂ ಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಮಂತ್ರಿಯಾಗಿ ಏನು ಮಾಡಲು ಆಗುತ್ತೆ. ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗಲು ಅವರಿಂದ ಆಗುತ್ತದೆಯೇ, ಶೋಭ ಕರಂದ್ಲಾಜೆ, ಸದಾನಂದಗೌಡ ಅವರು ಮಂತ್ರಿಯಾಗಿ ಏನು ಕೊಡುಗೆ ಕೊಟ್ಟಿದ್ದಾರೆ, ಅವರಂತೆಯೇ ಇವರೂ ಸಹ ಒಂದು ಕಾತೆ ನೋಡಿಕೊಲ್ಳಬಹುದು ಅಷ್ಟೆ. ಆದರೆ ಯಾವುದೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಬೈಪಾಸ್ ಮಾಡಲು ಆಗುವುದಿಲ್ಲ ಎಂದರು.
ದೇವೇಗೌಡರು ಈ ರಾಜ್ಯ ಹಾಗೂ ರಾಷ್ಟ್ರದಲ್ಲಿ ನಾಯಕ. ಅವರು ಇನ್ನೊಬ್ಬರನ್ನು ಟೀಕೆ ಮಾಡುವ ಬಗ್ಗೆ ಜನರಿಗೆ ಗೊತ್ತಿದೆ. ಇದೇ ಜನ ೧೯೯೯ ರಲ್ಲಿ ಅವರನ್ನೇ ಸೋಲಿಸಿದ್ದರು. ಸೋಲು-ಗೆಲುವನ್ನು ಜನ ಯಾವಾಗ ಬೇಕಾದರೂ ತೀರ್ಮಾನ ಮಾಡಬಹುದು. ಎಚ್.ಡಿ.ರೇವಣ್ಣ ಅವರು ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಜನತಾದಳ ಇರುತ್ತದೆಯೇ ಎನ್ನುವುದನ್ನು ನೋಡಿಕೊಳ್ಳಲಿ. ೧೩೬ ಸೀಟ್ ಗೆದ್ದಿರುವ ಕಾಂಗ್ರೆಸ್ ಪಕ್ಷವೇ ಇರುವುದಿಲ್ಲ ಎನ್ನುವುದಾದರೆ ೧೯ ಸೀಟ್ ಗೆದ್ದಿರುವ ಜೆಡಿಎಸ್ ಇರುತ್ತದೆಯೇ ಎಂದು ಕುಟುಕಿದರು. ಸಭೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಇತರರು ಭಾಗವಹಿಸಿದ್ದರು.