ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವ ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ನಂಜನಗೂಡು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಖಾತೆಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಳಸಿಕೊಂಡು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
ಗ್ರಾಮದ ನಿವಾಸಿ ಮಂಜುಳಾ ಎಂಬುವರು ಟೈಲರಿಂಗ್ ವೃತ್ತಿ ಮಾಡಿ ಕೊಂಡಿದ್ದು, ಹೊಲಿಗೆ ಯಂತ್ರ ಖರೀದಿಸುವ ಉದ್ದೇಶದಿಂದ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟಿದ್ದರು.
ಈ ನಡುವೆ ಶೌಚಾಲಯವೇ ಕುಟುಂಬದ ಬಳಕೆಗೆ ಮುಖ್ಯ ಎಂಬುದನ್ನು ಅರಿತು ತಾವು ಕೂಡಿಟ್ಟಿದ್ದ ಹಣದಿಂದ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡ ಅವರು, ಡಿಸೆಂಬರ್ನಲ್ಲಿ ಗ್ರಾಮದಲ್ಲಿ ನಡೆದ ಶೌಚಾಲಯ ಬಳಕೆ ಜಾಗೃತಿ ಜಾಥಾವು ಸ್ವಂತಕ್ಕೆ ಶೌಚಗೃಹ ಕಟ್ಟಿಸಿಕೊಳ್ಳಲು ಪ್ರೇರಣೆಯಾಯಿತು ಎಂದು ಹೇಳಿದರು.