ನಂಜನಗೂಡು: ನಂಜನಗೂಡು ಪಟ್ಟಣದ ಎಂಜಿ ರಸ್ತೆಯಲ್ಲಿರುವ ಬಂಧನ್ ಕೊನ್ನಗರ್ ಸಂಸ್ಥೆಯ ಕಛೇರಿಯಲ್ಲಿ ಐಟಿಸಿ ಮತ್ತು ಬಂಧನ್ ಕೊನ್ನಗರ್ ಸಂಸ್ಥೆಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಪರಿಕರಗಳನ್ನು ಎನ್ಆರ್ ಎಂಎಲ್ ನ ಕಾರ್ಯಕ್ರಮ ಅಧಿಕಾರಿ ದಿವ್ಯಾ ವಿತರಿಸಿದರು.
ಬಳಿಕ ಎನ್ಆರ್ ಎಂಎಲ್ ನ ವಲಯ ಮೇಲ್ವಿಚಾರಕ ಹರೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಉದ್ಯೋಗವಕಾಶಗಳನ್ನು ನೀಡಬೇಕು ಹಾಗಾಗಿ ಐಟಿಸಿ ಮತ್ತು ಬಂಧನ್ ಕೊನ್ನಗರ್ ಸಂಸ್ಥೆಯವರು ಬಡತನದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಟೈಲರಿಂಗ್ ತರಬೇತಿಯನ್ನು ನೀಡಿ,
ಹೊಲಿಗೆ ಯಂತ್ರ, ತಳ್ಳುವ ಗಾಡಿ, ದಿನಸಿ ಅಂಗಡಿಗೆ ಬೇಕಾದ ದವಸ ಧಾನ್ಯಗಳ ವಸ್ತುಗಳು, ಪಾತ್ರೆ ಅಂಗಡಿಗೆ ಬೇಕಾದ ಪಾತ್ರೆಗಳ ಸಾಮಗ್ರಿಗಳು ಸೇರಿದಂತೆ ವಿವಿಧ ಬಗೆಯ ಪರಿಕರಗಳನ್ನು ಮಹಿಳೆಯರಿಗೆ ನೀಡಿ ಅವರ ಬದುಕಿಗೆ ಆಶ್ರಯವಾಗುತ್ತಿದ್ದಾರೆ.
ಮಹಿಳೆಯರು ಇದರ ಸದುಪಯೋಗವನ್ನು ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ನೀವು ಕಲಿತ ಕೆಲಸವನ್ನು ಇನ್ನೊಬ್ಬರಿಗೆ ಹೇಳಿಕೊಂಡು ಅವರಿಗೂ ಆಶ್ರಯ ನೀಡಬೇಕು ಎಂದು ತಿಳಿಸಿದರು.
ಸುಮಾರು 38ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಮತ್ತು ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಐಟಿಸಿ ಸಂಸ್ಥೆಯ ಹಿರಿಯ ಮೇಲ್ವಿಚಾರಕರಾದ ಮನೋಜ್, ಕಳಲೆ ಗ್ರಾ.ಪಂ ಮಾಜಿ ಸದಸ್ಯ ದೇವಣ್ಣ, ಬಂಧನ್ ಸಂಸ್ಥೆಯ ರಚನಾ, ಹರ್ಷವರ್ಧನ್, ಚಂದ್ರಶೇಖರ್, ಹರ್ಷ, ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.