ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ನಾನು ಬಿಜೆಪಿ ಸೇರಲು ಹೋಗಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ನಗೆಪಾಟಲಿನದು. ನನ್ನ ಹೆಣವೂ ಸಹ ಬಿಜೆಪಿಗೆ ಹೋಗದು. ನಾನು ಯಾವುದೇ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡಿದರೇ, ಅದಕ್ಕೆ ಆ ಪಕ್ಷವನ್ನು ಸೇರುತ್ತೇನೆ ಎಂದು ಹೇಳುವುದು ಸರಿಯಲ್ಲ ಎಂದರು.
ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ಕಾವೇರಿ ನೀರು ಬಿಡುತ್ತಿದ್ದೇವೆ. ಖುಷಿಯಿಂದ ನೀರು ಬಿಡುತ್ತಿಲ್ಲ. ತಮಿಳುನಾಡು ವಿನಾ ಕಾರಣ ಕ್ಯಾತೆ ತೆಗೆಯುತ್ತಿದೆ. 21 ನೇ ತಾರೀಖಿನಂದು ಮತ್ತೆ ಕೋರ್ಟಿನಲ್ಲಿ ನಮ್ಮ ಕಷ್ಟವನ್ನು ವಿವರಿಸುತ್ತೇವೆ. ಬಿಜೆಪಿಯವರು ಇದರಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಲಿ, ಈಗ ಮತ್ತೆ ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಪ್ರಧಾನಿ ಬಳಿ ನಿಯೋಗ ಹೋಗಲು ತಯಾರಿದ್ದೆವು. ಆದರೆ ಪ್ರಧಾನಿ ಭೇಟಿಗೆ ದಿನಾಂಕವೇ ಸಿಗುತ್ತಿಲ್ಲ. ಬಿಜೆಪಿಯವರಿಗೆ ಹೇಳಿದರೆ ಅವರು ಕೇಳುವ ಸ್ಥಿತಿಯಲ್ಲಿಲ್ಲ. ಇಲ್ಲೇ ಕುಳಿತು ಕಥೆ ಹೇಳುತ್ತಿದ್ದಾರೆ, ನಾವು ರೈತರ ರಕ್ಷಣೆಗೆ ಈಗಲೂ ಬದ್ಧ ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ ಮಳೆ ಇಲ್ಲದ ಕೆಲವು ತಾಲೂಕುಗಳಲ್ಲಿ ಬರ ಬಂದಿದ್ದು ಸದ್ಯಕ್ಕೆ 61 ತಾಲ್ಲೂಕುಗಳನ್ನು ಬರದ ತಾಲ್ಲೂಕುಗಳೆಂದು ಪಟ್ಟಿ ಮಾಡಿದ್ದೇವೆ. ಇನ್ನೂ 136 ತಾಲ್ಲೂಕುಗಳಲ್ಲಿ ಬರ ಅಧ್ಯಯನ ನಡೆಯುತ್ತಿದೆ. ಅದರ ವರದಿ ಸೇರಿಸಿ, ಮುಂದಿನ ಕ್ಯಾಬಿನೆಟ್ನಲ್ಲಿ ಬರ ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.