ನಂಜನಗೂಡು: ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗಿದ್ದು, ಚುನಾವಣೆಯ ಮೂಲಕ ನಿರ್ದೇಶಕರು ಬಹುಮತ ಪಡೆದು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ನಿರ್ದೇಶಕರು ಆಯ್ಕೆಯಾದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಕೆ ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಸಾಲಗಾರರ ಕ್ಷೇತ್ರದಿಂದ 18 ಅಭ್ಯರ್ಥಿಗಳು, ಸಾಲಗಾರರಲ್ಲದ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಕಣಕ್ಕೆ ಇಳಿದು ಸ್ಪರ್ಧೆ ಮಾಡಿದ್ದರು. ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಗಟ್ಟವಾಡಿ ಕೆ.ಪ್ರಕಾಶ್, ಚುಂಚನಹಳ್ಳಿ ದಳಪತಿ ಕೆ.ಮಹದೇವಪ್ಪ, ಕೋಣನೂರಿನ ಕೆ.ಎಂ ಚಿಕ್ಕ ಬಸವಣ್ಣ, ಗಟ್ಟವಾಡಿ ನಾಗಣ್ಣ, ಟಿ.ಮಹೇಶ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ದೊಡ್ಡ ಕವಲಂದೆಯ ಜಿ. ಸುರೇಶ್, ಹಿಂದುಳಿದ ವರ್ಗ ಎ ನಿಂದ ನಿಸಾರ್ ಅಹಮದ್,
ಹಿಂದುಳಿದ ವರ್ಗ ಪ್ರವರ್ಗ. ಬಿಯಿಂದ ಗಟ್ಟವಾಡಿಪುರ ಜಿ.ಕೆ ಪ್ರಕಾಶ್, ಮಹಿಳಾ ಮೀಸಲು ಕ್ಷೇತ್ರದಿಂದ ಗಟ್ಟವಾಡಿಪುರ ಗೀತಾ, ಹರಗನಪುರ ಪೂರ್ಣಿಮಾ, ಪರಿಶಿಷ್ಟ ಪಂಗಡದಿಂದ ಗಟ್ಟವಾಡಿಪುರದ ರಮೇಶ್ ಎಂಬುವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಗಟ್ಟವಾಡಿ ಗುರುಪಾದಸ್ವಾಮಿ ಮತ್ತು ಕೆ.ಆರ್ ಪುರದ ಕೆ.ಪಿ ಮಹದೇವಪ್ಪ, ಇಲಿಯಾಜ್ ಅಹಮ್ಮದ್ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಗುರುಪಾದಸ್ವಾಮಿ ಮತ್ತು ಮಹದೇವಪ್ಪ ರವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಕೆ.ಆರ್ ಪುರದ ಕೆ.ಪಿ ಮಹದೇವಪ್ಪ 156 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಗಟ್ಟವಾಡಿ ಗುರುಪಾದಸ್ವಾಮಿ 13 ಮತಗಳ ಅಂತರದಲ್ಲಿ ಸೋಲು ಕಂಡರು.
ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಪ್ರಾಮಾಣಿಕವಾಗಿ ಶ್ರಮಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹಾಗೂ ಮಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ ಪ್ರಕಾಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಳಪತಿ ಮಹಾದೇವಪ್ಪ, ಬಿಜೆಪಿ ಮುಖಂಡ ಎಂ.ಸಿದ್ದರಾಜು, ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.