ಮೈಸೂರು: ಭಾವಚಿತ್ರಗಳನ್ನು ಕಿಡಿಗೇಡಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ಮತ್ತು ಕುಟುಂಬದ ಮಾಹಿತಿಯನ್ನು ಹಂಚಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಕಿವಿಮಾತು ಹೇಳಿದ್ದಾರೆ.
ನಗರದ ಮೈಸೂರು- ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಲೇಜು ಆಂತರಿಕ ದೂರು ಸ್ವೀಕಾರ ಸಮಿತಿ (ಸಿ.ಐ.ಸಿ.ಸಿ) ಹಾಗೂ ಮೈಸೂರು ಜಿಲ್ಲಾ ಪೋಲಿಸ್ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿ ಸಮೂಹ ಭಾರತದ ಭವಿಷ್ಯತ್ತಿನ ಪ್ರಜೆಗಳಾಗಿದ್ದು, ನೆಲದ ಕಾನೂನನ್ನು ಗೌರವಿಸಬೇಕು, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಎಚ್ಚರವಾಗಿರಬೇಕು, ಯಾವುದೇ ವೈಯಕ್ತಿಕ ಮಾಹಿತಿಗಳನ್ನು, ಕುಟುಂಬದವರ ಭಾವಚಿತ್ತಗಳನ್ನು ಸಾಮಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಾರದು, ಇವುಗಳನ್ನು ಕಿಡಿಗೇಡಿಗಳು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಮಾತನಾಡಿ ವಿದ್ಯಾರ್ಥಿಗಳು ದ್ವಿಚಕ್ರ ಚಾಲನೆ ಮಾಡುವಾಗ ಹಿಂಬದಿಯ ಸವಾರರೂ ಸೇರಿದಂತೆ ಇಬ್ಬರೂ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕೋವಿಡ್-19ನಲ್ಲಿ ಉಂಟಾದ ಸಾವು ನೋವುಗಳಿಗಿಂತ ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಸಾವೀಗೀಡಾಗುತ್ತಿರುವ ಸಂಖ್ಯೆಯೇ ಅಂಕಿ-ಅಂಶಗಳ ಪ್ರಕಾರ ಅಧಿಕವಾಗಿದೆ, ಅಲ್ಲದೇ ವಾಹನಗಳಿಗೆ ಸಂಬಂಧಿಸಿದ ನವೀಕರಿಸಿದ ವಾಹನ ವಿಮಾಪತ್ರ, ಚಾಲನಾ ಪರವಾನಗಿ ಸೇರಿದಂತೆ ಇತರ ಎಲ್ಲಾ ಅವಶ್ಯಕ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.
ಜಾಗೃತಿ ಕಾರ್ಯಗಾರದಲ್ಲಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಾನಂದಶೆಟ್ಟಿ, ವರುಣಾ ಠಾಣಾ ಉಪ ನಿರೀಕ್ಷಕ ಚೇತನ್ ಕಾನೂನು ಮತ್ತು ಅಪರಾಧಗಳ ಕುರಿತು ಮಾತನಾಡಿದರು. ಎಟಿಎಂಇ ಆಡಳಿತ ಮಂಡಳಿ ಕಾರ್ಯದರ್ಶಿ ಕೆ. ಶಿವಶಂಕರ್, ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ, ಐಕ್ಯೂಎಸಿ ನಿರ್ದೇಶಕ ಡಾ.ಬಸವರಾಜ್ ಎಲ್, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಡೀನ್ಗಳಾದ ಡಾ.ಭಾಗ್ಯಶ್ರೀ ಎಸ್.ಆರ್, ಡಾ.ಎಂಎಸ್. ಗೋವಿಂದೇಗೌಡ, ಸಿಐಸಿಸಿ ಸದಸ್ಯ ಚಂದ್ರಶೇಖರ್, ಎನ್.ಎಸ್.ಎಸ್. ಅಧಿಕಾರಿ ರುದ್ರೇಶ್.ಎ.ಎನ್, ಜಸ್ಲೀನ್ ಎಫ್, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.