ಚಾಮರಾಜನಗರ: ಕಾವೇರಿ ನೀರು ಹೋರಾಟದ ಕಿಚ್ಚು ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲೂ ತಟ್ಟಿದ್ದು, ಎರಡೂ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ಅಂತರ ರಾಜ್ಯ ಗಡಿಯಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದ ಬೆಂಗಳೂರು ಸೇರಿದಂತೆ ಹಲವೆಡೆ ಬಂದ್ ಮತ್ತು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು-ಕರ್ನಾಟಕ ಗಡಿಭಾಗದ ಹಾಸನೂರು ಕಾರ್ಯಪಾಳ್ಯ ಚೆಕ್ ಪೋಸ್ಟ್ ಬಳಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ತಮಿಳುನಾಡಿನಿಂದ ಕರ್ನಾಟಕ ರಾಜ್ಯಕ್ಕೆ ತೆರಳುವ ವಾಹನಗಳಿಗೆ ಅನುಮತಿ ನಿರಾಕರಿಸಲಾಗಿದೆ.
ಸತ್ಯಮಂಗಲ ಭಾಗದಿಂದ ತಾಳವಾಡಿಗೆ ಬರುವ ಬಸ್ಸು, ಕಾರು ಸೇರಿದಂತೆ ವಾಹನಗಳು ತಮಿಳುನಾಡು ಕರ್ನಾಟಕ ರಾಜ್ಯ ಗಡಿಯಲ್ಲಿರುವ ಪುಣಜನೂರು ಚೆಕ್ ಪೋಸ್ಟ್ ಮೂಲಕ ದಿಂಬಂ ತಲಮಲೈ ಸೇರಿದಂತೆ ಅರಣ್ಯ ಪ್ರದೇಶದ ಮೂಲಕ ಹೋಗುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಿಂಬಂ ತಲಮಲೈ ಅರಣ್ಯ ಪ್ರದೇಶದ ಮೂಲಕ ಸತ್ಯಮಂಗಲಂ, ಕೊಯಮತ್ತೂರು, ತಿರುಪುರ್ ಮತ್ತು ಇತರ ಪ್ರದೇಶಗಳಿಗೆ ಸರ್ಕಾರಿ ಬಸ್ ಗಳು ಸಹ ಓಡುತ್ತಿವೆ. ರಾಜ್ಯದ ಗಡಿಯಲ್ಲಿ ತಮಿಳುನಾಡು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.