ಚಾಮರಾಜನಗರ: ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಎಲ್ಲರೂ ಬಂಧಿಯಾಗಿದ್ದಾಗ ಇಲ್ಲೊಬ್ಬಳು ವಿದ್ಯಾರ್ಥಿನಿ ಸಾಹಿತಿಯಾದಳು. ಸಾಮಾನ್ಯರು ತನ್ನ ನೆಚ್ಚಿನ ಶಿಕ್ಷಕಿಯನ್ನು ನೆನೆಯುತ್ತಿದ್ದರೆ ಈ ವಿಭಿನ್ನ ವಿದ್ಯಾರ್ಥಿನಿ ತನ್ನ ಗುರುವಿನ ಕುರಿತು ಪುಸ್ತಕ ಬರೆದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ ಮಾಡಿದ್ದಾಳೆ..!
ಚಾಮರಾಜನಗರ ತಾಲೂಕಿನ ದೊಡ್ಡಮೋಳೆಯ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಮತ್ತು ಗಣೇಶ್ ಪುತ್ರಿ, ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ತೃತೀಯ ವರ್ಷದ ವಿದ್ಯಾರ್ಥಿನಿ ಜಿ.ಅಮೃತಾ ಈ ಸಾಧನೆ ಮಾಡಿದ್ದಾಳೆ. ಈಕೆ ತನ್ನ ಊರಿನ ಸರ್ಕಾರಿ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾಳೆ. 6ನೇ ತರಗತಿ ಓದುವಾಗ ಸುಷ್ಮಾ ಎನ್ನುವವರು ಸಮಾಜ-ವಿಜ್ಞಾನ ಶಿಕ್ಷಕಿಯಾಗಿ ಶಾಲೆಗ ಬಂದರು.
ಪ್ರಸ್ತುತ ಇವರು ಮೈಸೂರು ಜಿಲ್ಲೆಯ ನಂಜನಗೂಡಿನ ಬಿದರಗೂಡಿನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶಿಕ್ಷಕಿಯ ಬಳಿ 8ನೇ ತರಗತಿವರೆಗೆ ಪಾಠ ಕೇಳಿದ್ದ ಜಿ.ಅಮೃತಾ ಅತೀವ ಗೌರವ, ಪ್ರೀತಿಯ ಒಡನಾಟವನ್ನು ಬೆಳೆಸಿಕೊಂಡಳು. ಇದು ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣ ಮುಂದುವರೆಸಿ ಬಿ.ಕಾಂ ಪದವಿ ತರಗತಿಗೆ ಸೇರಿದರೂ ನೆಚ್ಚಿನ ಶಿಕ್ಷಕಿ ಸುಷ್ಮಾ ಮೇಲಿನ ಅಭಿಮಾನ ಕಡಿಮೆಯಾಗಲೇ ಇಲ್ಲ.
ಕೋವಿಡ್ ಸಂದರ್ಭದಲ್ಲಿ ಲಾಕ್ಡೌನ್ ಆದಾಗ ಮನೆಯಲ್ಲೇ ಇದ್ದ ಜಿ.ಅಮೃತಾ ತನ್ನ ನೆಚ್ಚಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸುಷ್ಮಾ ಕುರಿತು ‘ನನ್ನ ಗುರುವೆಂಬ ಸುಗಮ’ಪುಸ್ತಕ ಬರೆಯಲಾರಂಭಿಸಿದಳು. ಶಿಕ್ಷಕಿಯ ಗುಣ, ಇಬ್ಬರ ನಡುವಿನ ಒಡನಾಟವನ್ನು ಬರಹಕ್ಕಿಳಿಸಿದಳು. ‘ನನ್ನ ಗುರುವೆಂಬ ಸುಗಮ’ ಶೀರ್ಷಿಕೆಯಡಿ 16 ಕವಿತೆಗಳನ್ನು ರಚಿಸಿದಳು. ಒಂದು ವರ್ಷಗಳ ಕಾಲ ಸಿದ್ಧ ಪಡಿಸಿರುವ ಈ ಪುಸ್ತಕವನ್ನು ಕಳೆದ ವರ್ಷ ಸಂವನ್ ಪಬ್ಲಿಕೇಷನ್ ಪ್ರಕಟಿಸಿತು. ಈ ಕೃತಿಯ 16 ಕವಿತೆಗಳ ವಿಶೇಷತೆ ಜಿ.ಅಮೃತಾಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರುವಂತೆ ಮಾಡಿದೆ. ಫೆ 28ರಂದು ಪದಕ, ಪ್ರಮಾಣಪತ್ರ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಜಿ.ಅಮೃತಾ ಕೈಸೇರಿದೆ. ಈ ಪ್ರಮಾಣ ಪತ್ರದಲ್ಲಿ ಕರ್ನಾಟಕದ ಚಾಮರಾಜನಗರದ ಅಮೃತಾ. ಜಿ ಅವರು ‘ನನ್ನ ಗುರುವೆಂಬ ಸುಗಮ’ ಎಂಬ ಶೀರ್ಷಿಕೆಯ 16 ಕನ್ನಡ ಕವಿತೆಗಳ ಪುಸ್ತಕವನ್ನು ಬರೆದಿದ್ದಕ್ಕಾಗಿ ‘ಐಬಿಎ್ ಸಾಧಕ’ ಎಂದು ಹೆಸರಿಸಿದ್ದಾರೆ ಎಂದು ಬರೆದಿದೆ.
16 ಕವಿತೆಗಳಲ್ಲೇನಿದೆ..?:
‘ನನ್ನ ಗುರುವೆಂಬ ಸುಗಮ’ ಶೀರ್ಷಿಕೆ ಗುರವಿನ ಸನಿಹ ನನ್ನ ಧ್ಯಾನ ಎಂಬ ಅಡಿಬರಹದ 67 ಪುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಜಿ.ಅಮೃತಾ ತನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಕುರಿತು ಬರೆದಿದ್ದಾಳೆ. ಗುರುವೆಂದರೆ ಯಾರು..?, ಗುರುವಿಗೆ ಹೃದಯ ಪೂರ್ವಕ ನಮನ, ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ, ದಡ ಸೇರಿಸಲು ನಾವಿಕರಾಗಿ, ಇಲ್ಲದೇ ನಿಮ್ಮ ಮಾರ್ಗದರ್ಶನ, ಅದೇ ಮೊಗವು ಅದೇ ನಗುವು, ನೀವು ಹೇಳಿಕೊಟ್ಟ ನೈತಿಕತೆ ನೀತಿ, ದೇವತೆಯ ಆಗಮನ ಎಂಬಿತ್ಯಾದಿ ಮೊದಲ ಸಾಲುಗಳ ಕವಿತೆಗಳನ್ನು ಪುಸ್ತಕದಲ್ಲಿವೆ.
ಸಾಧಕಿ ವಿದ್ಯಾರ್ಥಿನಿ:
ಜಿ.ಅಮೃತಾ ಸಾಧನೆ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗೌರವ ಹೆಚ್ಚಿಸಿದೆ. ಕಾಲೇಜಿನ ಪ್ರಾಂಶುಪಾಲೆ ಸುಮತಿ ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿ, ‘ನಮ್ಮ ಕಾಲೇಜಿನ ವಿದ್ಯಾರ್ಥಿನಿ ಈ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ’ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿ ಜಿ.ಅಮೃತಾಗೆ ಶ್ರೀವರಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಂಗಾರು ಸನ್ಮಾನಿಸಿ ಮಾ.17ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘ಸಾಧಕ ವಿದ್ಯಾರ್ಥಿ’ ಪ್ರಶಸ್ತಿ, ಕಲಿಕಾ ಸಾಮಗ್ರಿ ನೀಡಿ ಸನ್ಮಾನಿಸಲಾಗುವುದು ಎಂದಿದ್ದಾರೆ.