ಚಾಮರಾಜನಗರ: ಅದ್ಯಾಕೋ ಗೊತ್ತಿಲ್ಲ ಸಣ್ಣ ಈರುಳ್ಳಿ ಬೆಳೆಯುವ ಚಾಮರಾಜನಗರ ರೈತರ ನಸೀಬು ಸರಿಯಿಲ್ಲದಂತಾಗಿದೆ. ಪ್ರತಿವರ್ಷವೂ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡು ರೈತರು ಸಣ್ಣ ಈರುಳ್ಳಿ ಬೆಳೆಯುತ್ತಿದ್ದರೂ ಅದು ಬೆಳೆದು ಕೀಳುವ ವೇಳೆಗೆ ಬೆಲೆ ಕುಸಿತಗೊಂಡು ಕಣ್ಣೀರಲ್ಲಿ ಕೈತೊಳೆಯುವುದು ಮಾಮೂಲಿಯಾಗಿತ್ತು. ಆದರೆ ಈ ಬಾರಿ ಬೆಲೆಯಿದ್ದರೂ ಅಕಾಲಿಕ ಮಳೆಯಿಂದ ಇಳುವರಿ ಬಾರದಿರುವುದರಿಂದ ಕಿತ್ತರೆ ಕೂಲಿ ಹಣವೂ ಬಾರದ ಕಾರಣದಿಂದ ಉಳುಮೆ ಮಾಡಿ ನಾಶ ಮಾಡುವ ಸ್ಥಿತಿಗೆ ರೈತರು ತಲುಪಿದ್ದಾರೆ.
ಸಾಮಾನ್ಯ ವಾಗಿ ಈರುಳ್ಳಿ ಬೆಳೆದ ರೈತ ಒಂದಷ್ಟು ಆದಾಯ ಪಡೆದು ಖುಷಿಪಡಬೇಕಾಗಿತ್ತು. ಆದರೆ ರೈತರು ಅದನ್ನು ಕೀಳುವಾಗಲೇ ಕಣ್ಣೀರು ಸುರಿಸುವ ಪರಿಸ್ಥಿತಿಗೆ ಬಂದು ತಲುಪಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸಣ್ಣ ಈರುಳ್ಳಿಗೆ ತಮಿಳುನಾಡು ಮತ್ತು ಕೇರಳದಲ್ಲಿ ಬೇಡಿಕೆಯಿದ್ದು, ಚಾಮರಾಜನಗರ ಜಿಲ್ಲೆಗೆ ಹೊರಗಿನಿಂದ ವ್ಯಾಪಾರಸ್ಥರು ಆಗಮಿಸಿ ಖರೀದಿ ಮಾಡಿ ಕೊಂಡು ತಮ್ಮೂರಿಗೆ ಹೋಗುವುದು ಒಂದು ಕಡೆಯಾದರೆ ಮತ್ತೊಂದೆಡೆ ಇಲ್ಲಿನ ರೈತರೇ ತಮಿಳುನಾಡಿಗೆ ಕೊಂಡೊಯ್ದು ವ್ಯಾಪಾರ ಮಾಡಿಕೊಂಡು ಬರುತ್ತಾರೆ. ಆದರೆ ಈ ಬಾರಿ ಬೇಡಿಕೆಯಿದ್ದರೂ ಇಳುವರಿ ಇಲ್ಲದ ಪರಿಸ್ಥಿತಿ ಎದುರಾಗಿದೆ.
ಇಳುವರಿ ಕುಸಿತ ತಂದ ಸಂಕಷ್ಟ: ಈ ಹಿಂದೆ ಅಧಿಕ ಇಳುವರಿ ಬರುತ್ತಿತ್ತಾದರೂ ದರ ಕುಸಿತದಿಂದ ರೈತರು ಕಂಗಾಲಾಗುತ್ತಿದ್ದರು. ಆದರೆ ಈ ಬಾರಿ ಅಕಾಲಿಕ ಮಳೆಯಿಂದ ಈರುಳ್ಳಿ ರೈತರ ಕೈಸೇರದಂತಾಗಿದೆ. ಇದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಹೀಗಾಗಿ ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ ಬೆಳೆದಿದ್ದ ಈರುಳ್ಳಿ (ಸಣ್ಣ ಈರುಳ್ಳಿ) ಬೆಳೆಯನ್ನು ಐದಾರು ಮಂದಿ ರೈತರು ಸ್ವತಃ ತಾವೇ ನಾಶಪಡಿಸಿದ್ದಾರೆ.
ಅಕಾಲಿಕ ಮಳೆಯ ಪರಿಣಾಮ ಈರುಳ್ಳಿ ಸರಿಯಾಗಿ ಬೆಳೆಯದೇ ಇರುವುದರಿಂದ ರೈತರು ಈ ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡುತ್ತಿತ್ತು. ಆದರೆ, ಮಳೆರಾಯನ ಅಬ್ಬರಕ್ಕೆ ಸಿಲುಕಿದ ಈರುಳ್ಳಿ ರೈತನ ಕೈಸೇರಲಿಲ್ಲ. ಅಲ್ಪಾವಧಿ ಬೆಳೆಯಾಗಿರುವ ಸಣ್ಣ ಈರುಳ್ಳಿ ಸಾಮಾನ್ಯವಾಗಿ 55ರಿಂದ 75 ದಿನಗಳಲ್ಲಿ ಕಟಾವಿಗೆ ಬರಬೇಕಿತ್ತು. ಜಿಲ್ಲೆಯಲ್ಲಿ ಬಹುತೇಕ ರೈತರು ಸಣ್ಣ ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಈ ಈರುಳ್ಳಿಯನ್ನು ಗುಂಡ್ಲುಪೇಟೆ ತಾಲೂಕಿನ ಎಪಿಎಂಸಿಯಿಂದಲೇ ತಂದು ಬಿತ್ತನೆ ಮಾಡಿದ್ದರು. ತಿಂಗಳುಗಟ್ಟಲೆ ಬೆಳೆಯನ್ನು ಪೋಷಿಸಿದ್ದರು. ಅಕಾಲಿಕ ಮಳೆಯಿಂದ ಕಾಯಿ ಕಟ್ಟುವ ಮುನ್ನವೇ ಈರುಳ್ಳಿ ಹಾಳಾಗಿದೆ. ಬೆಳೆಗೆ ಹಾಕಿದ್ದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇನ್ನು ಕೆ.ಕೆ.ಹುಂಡಿಯ ರೈತರು 2ರಿಂದ 5 ಲಕ್ಷ ರೂಪಾಯಿವರೆಗೆ ಖರ್ಚು ಮಾಡಿದ್ದು, ಆದರೆ ಈಗ ಅದೆಲ್ಲವನ್ನೂ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ನಾಶ ಮಾಡಿದ್ದಾರೆ. ಇದರಿಂದ ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ. ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈಗೆ ಸಿಗದೇ ಇರುವುದರಿಂದ ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 35ರಿಂದ 40 ರೂ. ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರೈತರು ನೆಮ್ಮದಿಯುಸಿರು ಬಿಡಬಹುದಿತ್ತೇನೋ ಆದರೆ ಆಗಿದ್ದೇ ಬೇರೆ… ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಕಾದು ನೋಡಬೇಕಿದೆ.