ಚಾಮರಾಜನಗರ: ಮನೆಯ ಬಳಿ ಆನೆಗಳು ಬರುತ್ತವೆ ನಮ್ಮನ್ನ ಗ್ರಾಮದಿಂದ ಸ್ಥಳಾಂತರಗೊಳಿಸಿ ಎಂದು ಚಂಗಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಬಳಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಟ್ಟ ಕಾನನದ ನಡುವೆ ಇರುವ ಚಂಗಡಿ ಗ್ರಾಮದಲ್ಲಿನ ಗ್ರಾಮಸ್ಥರದ್ದು ನಿತ್ಯ ನರಕಯಾತನೆಯ ಬದುಕಾಗಿದ್ದು ಮಲೆ ಮಹದೇಶ್ವರಬೆಟ್ಟದ ದಟ್ಟಾರಣ್ಯದ ನಡುವೆ ಇರುವುದರಿಂದ ಇಲ್ಲಿ ಕಾಡು ಪ್ರಾಣಿಗಳ ಹಾವಳಿ ನಿತ್ಯ ನಿರಂತರ. ಕಾಡು ಪ್ರಾಣಿಗಳ ದಾಳಿಯಿಂದ ನಮ್ಮ ಗ್ರಾಮಸ್ಥರು ಮೃತಪಟ್ಟ ನಿದರ್ಶನವೂ ಇದೆ.
ಮನೆಯ ಬಳಿಯೇ ಕಾಡಾನೆಗಳು ಬಂದು ತೊಂದರೆ ಕೊಡುವುದರ ಜೊತೆಗೆ ಜಮೀನುಗಳ ಬಳಿ ಯಾವುದೇ ಫಸಲು ಬೆಳೆಯಲು ಆಗದ ಸ್ಥಿತಿ ಇದೆ ಎಂದು ಇಲ್ಲಿಯ ಮಹಿಳೆಯರು ಹಾಗೂ ರೈತರು ತಮ್ಮ ಆಳಲನ್ನು ತೋಡಿಕೊಂಡರು.
ಮೂಲ ಸೌಲಭ್ಯ ಕೊರತೆ, ಕಾಡು ಪ್ರಾಣಿಗಳ ನಿರಂತರ ಹಾವಳಿ, ದಾಳಿ ಸೇರಿದಂತೆ ನಾನಾ ಸಮಸ್ಯೆಗಳಿಂದ ಬೇಸತ್ತಿದ್ದೇವೆ ಬೇಗ ಸ್ಥಳಾಂತರಗೊಳಿಸಿ ಎಂದು ರೈತ ಸಂಘದ ಅಧ್ಯಕ್ಷ ಚಂಗಡಿ ಕರೆಯಪ್ಪ ಒತ್ತಾಯಿಸಿದ್ದಾರೆ.