ಚಾಮರಾಜನಗರ: ಜಿಲ್ಲೆಯ ಬಂಡೀಪುರ ಅಭಯಾರಣ್ಯದ ಗುಂಡ್ಲುಪೇಟೆ ಬಫರ್ ಝೋನ್ ನ ಬೆಟ್ಟದಮಾದಹಳ್ಳಿ ಗ್ರಾಮದ ರೈತನ ಹೊಲದಲ್ಲಿ ಸಲಗದ ದಾಳಿಯಿಂದ ರೈತನೊಬ್ಬ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಬೆಟ್ಟದಮಾದಹಳ್ಳಿ ಗ್ರಾಮದ ರೈತ ದೇವರಾಜಪ್ಪ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಒಂಟಿ ಸಲಗ ದಾಳಿ ಮಾಡಿದೆ. ರೈತನ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಟ್ಟದಮಾದಹಳ್ಳಿ ವ್ಯಾಪ್ತಿಯ ರೈತರ ಹೊಲಗಳಲ್ಲಿ ಬಾಳೆ, ಬೀನ್ಸ್ ಮತ್ತು ಇತರ ತೋಟಗಳಿಗೆ ನುಗ್ಗಿದ ಸಲಗವು ಹಲವಾರು ಹೊಲಗಳಲ್ಲಿ ಅಳವಡಿಸಲಾದ ತಂತಿ ಬೇಲಿಯನ್ನು ತುಳಿದುಹಾಕಿತ್ತು. ಬಾಳೆ ತೋಟದಲ್ಲಿ ಒಂಟಿ ಸಲಗ ಪತ್ತೆಯಾದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.