ಚಾಮರಾಜನಗರ: ವ್ಯಕ್ತಿಯೊಬ್ಬ ಮದುವೆಯಾದ ಐದೇ ದಿನಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾನಗರ ಜಿಲ್ಲೆಯ ಕೊಳ್ಳೇಗಾಲದ ಜಿ.ಪಿ.ಮಲ್ಲಪ್ಪಪುರಂನಲ್ಲಿ ನಡೆದಿದ್ದು, ಈ ಪ್ರಕರಣ ಅನುಮಾನವನ್ನು ಹುಟ್ಟು ಹಾಕಿದ್ದು, ಪತ್ನಿ ಈ ಸಂಬಂಧ ದೂರು ನೀಡಿದ್ದಾರೆ.
ಜಿ.ಪಿ.ಮಲ್ಲಪ್ಪಪುರಂ ನಿವಾಸಿ ಸತೀಶ್ ಬಾಬು (43) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ಈತ ಐದು ದಿನಗಳ ಹಿಂದೆ ಮೈಸೂರು ಜಿಲ್ಲೆ ತಿ.ನರಸಿಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮ ಅವರನ್ನು ಅದ್ಧೂರಿಯಾಗಿ ವಿವಾಹವಾಗಿದ್ದನು. ಇದಾದ ಮೂರು ದಿನಗಳ ಬಳಿಕ ತನಗೆ ಅನಾರೋಗ್ಯ ಇರುವುದರಿಂದ ಯಾವುದೇ ಸಂಪ್ರದಾಯ, ಆಚರಣೆಗಳು ಬೇಡ ಎಂದು ಸತೀಶ್ ಬಾಬು ಹೇಳಿದ್ದನು. ಕೃಷಿಕನಾಗಿದ್ದ ಈತ ಪ್ರತಿದಿನ ಎಂದಿನಂತೆ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಬೆಳಿಗ್ಗೆ ಜಮೀನಿಗೆ ಹೋಗಿದ್ದವನು ಅಲ್ಲಿಂದ ಮನೆಗೆ ಹಿಂತಿರುಗಿ ಮನೆಯ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಾವಿನ ಹಿಂದೆ ನನಗೆ ಅನುಮಾನಗಳಿವೆ. ನನ್ನ ಗಂಡನ ಸಾವಿಗೆ ಅವರ ತಂದೆ ಲಿಂಗರಾಜು, ತಾಯಿ ಮಹದೇವಿ, ಸಂಬಂಧಿಕರಾದ ದೇವಾನಂದ್, ಪ್ರಕಾಶ್, ವಿಜಯಕುಮಾರ್ ಕಾರಣ. ಹಾಗಾಗಿ, ಅವರ ಮೇಲೆ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸತೀಶ್ ಬಾಬು ಪತ್ನಿ ಚೆನ್ನಾಜಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು