ಚಾಮರಾಜನಗರ: ಗೃಹರಕ್ಷಕದಳದ ಗೌರವಾನ್ವಿತ ಜಿಲ್ಲಾ ಕಮಾಂಡೆಂಟ್ ಹುದ್ದೆಗೆ ಸ್ವಯಂ ಪ್ರೇರಿತ ಸೇವಾ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಪದವಿಧರರಾಗಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ಸಂಘಟನೆಯ ಸದಸ್ಯರಾಗಿರಬಾರದು. ಇಲ್ಲವೇ ಸಂಬಂಧ ಹೊಂದಿರಬಾರದು. ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆ ಕಾರ್ಯಗಳ ನೆರವಿಗೆ ಸಂಬಂಧಿಸಿದ ಚಂದದಾರರಾಗಿರಬಾರದು. ಯಾವುದೇ ನ್ಯಾಯಾಲಯ ಅಥವಾ ವಿಚಾರಣಾ ಆಯೋಗದಿಂದ ಯಾವುದೇ ಅಪರಾಧಕ್ಕಾಗಿ ಅಥವಾ ದೋಷಾರೋಪಣೆ ಮಾಡಲ್ಪಟ್ಟಿರತಕ್ಕದಲ್ಲ.
ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಅನ್ವಯವಾಗುವಂತೆ 50 ವರ್ಷಗಳನ್ನು ಮೀರುವಂತಿಲ್ಲ. ಜಿಲ್ಲಾ ಕೇಂದ್ರದ 20 ಕಿ.ಮೀ ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು. ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸಧೃಡರಾಗಿರುವ ಬಗ್ಗೆ ಜಿಲ್ಲಾ ಸರ್ಜನ್ ಅವರಿಂದ ದೃಢೀಕರಿಸಿರಬೇಕು.
ಮಿಲಿಟರಿ ಸೇವೆ, ಪ್ಯಾರಾ ಮಿಲಿಟರಿ ಸೇವೆ, ಪೊಲೀಸ್ ಸೇವೆಯಲ್ಲಿ ಐದು ವರ್ಷಗಳ ತೃಪ್ತಿದಾಯಕ ಸೇವೆ ಸಲ್ಲಿಸಿರುವವರು, ಶೌರ್ಯ ಪ್ರಶಸ್ತಿ ಪುರಸ್ಕೃತರು, ಎನ್ಸಿಸಿ ಯಲ್ಲಿ ಸಿ ಸರ್ಟಿಫಿಕೆಟ್ ಹೊಂದಿರುವವರನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ.
ಕಮಾಂಡೆಂಟ್ಗಳ ಅಧಿಕಾರ ಅವಧಿಯು ಸಾಮಾನ್ಯವಾಗಿ ಐದು ವರ್ಷಗಳಾಗಿರುತ್ತದೆ. ದೈಹಿಕವಾಗಿ ಅಥವಾ ವೈದ್ಯಕೀಯವಾಗಿ ಅನರ್ಹರಾಗಿದ್ದರೆ, ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಅಧಿಕೃತ ಸ್ಥಾನ ಸಂಪನ್ಮೂಲಗಳ ದುರುಪಯೋಗ, ಹಣಕಾಸಿನ ಅವ್ಯವಹಾರ ಮಾಡಿರುವುದು ಕಂಡು ಬಂದರೆ ಹುದ್ದೆಯಿಂದ ವಜಾಗೊಳಿಸಲು ಪೊಲೀಸ್ ಮಹಾನಿರ್ದೇಶಕರು ಮತ್ತು ಕಮಾಂಡೆಂಟ್ ಜನರಲ್ ಅವರು ಸರ್ಕಾರಕ್ಕೆ ಶಿಫಾರಸು ಮಾಡಬಹುದು. ಸ್ವಯಂ ಪ್ರೇರಣೆಯಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರೆ ಶಿಫಾರಸು ಮಾಡಬಹುದು. ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಹುದ್ದೆಯು ಸ್ವಯಂ ಪ್ರೇರಿತ ಸೇವಾ ಆಧಾರದ ಮೇಲಿನ ಸಂಪೂರ್ಣ ಗೌರವ ಹುದ್ದೆಯಾಗಿರುತ್ತದೆ. ಯಾವುದೇ ವೇತನ ನೀಡಲಾಗುವುದಿಲ್ಲ.
ಅರ್ಜಿಗಳನ್ನು ಚಾಮರಾಜನಗರದ ಜಿಲ್ಲಾಧಿಕಾರಿಯವರಿಂದ ಪಡೆಯಬೇಕು. ಸ್ವಯಂ ವಿವರ (ಬಯೋಡೇಟ), ಹುಟ್ಟಿದ ದಿನಾಂಕ, ಶೈಕ್ಷಣಿಕ ಅರ್ಹತೆ, ವಿಳಾಸ, ದೂರವಾಣಿ ಸಂಖ್ಯೆಯ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು. ಸ್ಥಳೀಯ ಇಬ್ಬರು ಗೌರಾವಾನ್ವಿತ ವ್ಯಕ್ತಿಗಳ ಶಿಫಾರಸ್ಸು ಸಲ್ಲಿಸಬೇಕು. ಉದ್ಯೋಗಿಗಳಾಗಿದ್ದಲ್ಲಿ ಕಚೇರಿಯ ಮುಖ್ಯಸ್ಥರಿಂದ ಪಡೆದ ಪತ್ರ ಲಗತ್ತಿಸಬೇಕು. ಅರ್ಜಿಗಳನ್ನು ಮಾರ್ಚ್ 18 ಅಥವಾ ಅದಕ್ಕಿಂತ ಮುಂಚಿತವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕು. ಅರ್ಜಿ ಪ್ರತಿಯೊಂದನ್ನು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳು ಹಾಗೂ ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹರಕ್ಷಕದಳದ ಮಹಾ ಸಮಾದೇಷ್ಟರು ಹಾಗೂ ಪೌರರಕ್ಷಣಾ ನಿರ್ದೇಶಕರ ಕಚೇರಿಗೆ ನೇರವಾಗಿ ಸಲ್ಲಿಕೆಯಾಗುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲವೆಂದು ಡಿಸಿಜಿ, ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣೆ ನಿರ್ದೇಶಕರಾದ ರೇಣುಕಾ ಕೆ. ಸುಕುಮಾರ್ ಅವರು ತಿಳಿಸಿದ್ದಾರೆ.