ಪಿರಿಯಾಪಟ್ಟಣ:ತಾಲೂಕಿನ ದೊಡ್ಡಬೇಲಾಳು ಗ್ರಾಮ ಸಮೀಪವಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿದೆ.
ಸೋಲಾರ್ ಪ್ಲಾಂಟ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಪ್ಲಾಂಟ್ ನ ಮುಖ್ಯದ್ವಾರದ ಬಳಿಯೇ ಚಿರತೆಗಳ ಓಡಾಟ ಕಂಡ ಪ್ಲಾಂಟ್ ಭದ್ರತಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪ್ಲಾಂಟ್ ಆವರಣದ ಸುತ್ತಮುತ್ತ ಹುಡುಕಾಟ ನಡೆಸಿದರೂ ಚಿರತೆಗಳು ಪತ್ತೆಯಾಗಲಿಲ್ಲ. ಸೋಲಾರ್ ಪವರ್ ಪ್ಲಾಂಟ್ ಆವರಣದ ಸುತ್ತ ಅಳವಡಿಸಿರುವ ಮುಳ್ಳು ತಂತಿ ಬೇಲಿಯಿಂದ ಚಿರತೆಗಳು ಹೊರಹೋಗುವುದು ಸಾಧ್ಯವಿಲ್ಲದ ಹಿನ್ನೆಲೆ ಸೋಲಾರ್ ಪ್ಲಾಂಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಎಚ್ಚರಿಕೆಯಿಂದಿದ್ದು ಆವರಣದಲ್ಲಿ ಓಡಾಡದಂತೆ ಸೂಚಿಸಿ ಪ್ಲಾಂಟ್ ಮುಖ್ಯ ಪ್ರವೇಶ ದ್ವಾರವನ್ನು ತೆರೆದಿಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ಲಾಂಟ್ ನ ಭದ್ರತಾ ಮುಖ್ಯಸ್ಥ ಬಿ.ಸಿ.ತಮ್ಮಣ್ಣೆಗೌಡ ಅವರು ಮಾತನಾಡಿ ಈ ಹಿಂದೆಯೂ ಸಹ ಪ್ಲಾಂಟ್ ಆವರಣದಲ್ಲಿ ಚಿರತೆಗಳ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ, ಚಿರತೆಗಳು ಪ್ರತ್ಯಕ್ಷವಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು ಶೀಘ್ರ ಅರಣ್ಯ ಇಲಾಖೆಯವರು ಚಿರತೆಗಳನ್ನು ಬಂಧಿಸಿ ಅರಣ್ಯಕ್ಕೆ ಅಟ್ಟುವಂತೆ ಕೋರಿದ್ದಾರೆ.