ಮೈಸೂರು: ಮೈಸೂರು ರಾಜಮನೆತನದ ಮತ್ತೊಂದು ಕುಡಿಗೆ ಬುಧವಾರ ಸಂಪ್ರದಾಯಬದ್ಧವಾಗಿ ತೊಟ್ಟಿಲು ಶಾಸ್ತ್ರದ ಸಂಭ್ರಮ ನಡೆಯಿತು. ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ದಂಪತಿ ಕಿರಿಯ ಪುತ್ರನಿಗೆ ಚಾಮುಂಡಿ ಬೆಟ್ಟದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು.
ಎರಡು ತಿಂಗಳ ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣಧಾರಿಯಾಗಿದ್ದ ವೇಳೆ ಪತ್ನಿ ತ್ರಿಷಿಕಾ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದು ಅರಮನೆಯ ಸಂತೋಷವನ್ನು ಇಮ್ಮಡಿಗೊಳಿಸಿತ್ತು.
ಈ ಹಿನ್ನೆಯಲ್ಲಿ ಬುಧವಾರ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ನಾನಾ ಪೂಜಾಕಾರ್ಯಗಳು ನೆರವೇರಿದವು. ದೇವಿಗೆ ಪೂಜೆ ಕಾರ್ಯಗಳು ಮುಗಿದ ನಂತರ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಸಲ್ಲಿಸಲಾಯಿತು. ಬಳಿಕ ತೊಟ್ಟಿಲು ಶಾಸ್ತ್ರ ನೆರವೇರಿಸಲಾಯಿತು. ಈ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೊದಲ ಪುತ್ರ ಆದ್ಯವೀರ್ ಉಪಸ್ಥಿತರಿದ್ದರು.