ಮೈಸೂರು: 50ರ ಸುವರ್ಣ ಸಂಭ್ರಮದ ಅಂಗವಾಗಿ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಜನವರಿ 18 ಹಾಗೂ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದರು
ಮೈಸೂರಿನ ಅಗ್ರಹಾರದ ಅಭಿನವ ಶಂಕರಾಲಯ. ಶಂಕರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬ್ರಾಹ್ಮಣ ಮಹಾ ಸಮ್ಮೇಳನದ ಪ್ರಚಾರದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ -ಬ್ರಾಹ್ಮಣರು ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು.
ಇತರ ಸಮಾಜಗಳಂತೆ ನಾವು ಸರ್ಕಾರದ ಸೌಲಭ್ಯ ಪಡೆಯಬೇಕು. ಮೊದಲು ನಮ್ಮ ಒಳಪಂಗಡ, ಅಚಾರ -ವಿಚಾರಗಳನ್ನು ಮನೆಯೊಳಗೆ ಮಾತ್ರ ಸೀಮಿತವಾಗಿಟ್ಟುಕೊಂಡು ನಾವೆಲ್ಲರೂ ಒಂದೇ ಎನ್ನುವುದರ ಮೂಲಕ ಸಂಘಟಿತರಾಗಿ, ಬ್ರಾಹ್ಮಣರು ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ತೋರಿಸಬೇಕಾದ ಅವಶ್ಯಕತೆ ಇದೆ’ ಎಂದು ಸಲಹೆ ನೀಡಿದರು.
ಜನವರಿ 18ರಂದುಬೆಳಿಗ್ಗೆ 7ಗಂಟೆಗೆ ಸಮ್ಮೇಳನದ ಧ್ವಜಾರೋಹಣ, 8 ಗಂಟೆಗೆ ಲಕ್ಷ ಗಾಯತ್ರಿ ಹೋಮ ಮತ್ತು ಸಮ್ಮೇಳನದ ಉದ್ಘಾಟನೆ, ಜಗದ್ಗುರು ಶಂಕರಾಚಾರ್ಯ ವಿದುಶೇಖರಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ನಿಮಿತ್ತ ಮಹಾಸನ್ನಿದಾಂಗಳವರ ಸೇವೆಯಲ್ಲಿ ತೊಡಗಿದ ಸೇವಾಕರ್ತರಿಗೆ ಗೌರವ ಸಮರ್ಪಣೆ ನಡೆಯಲಿದೆ. ಜ.19ರಂದು ವೇದ ಪಾರಾಯಣ, ಧರ್ಮ ಸಭೆ ಜರುಗುವುದು. ವಿಚಾರಗೋಷ್ಠಿ, ಸಮಾರೋಪ ಕಾರ್ಯಕ್ರಮ ಜರುಗಲಿವೆ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮೈಸೂರಿನಿಂದ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಎರಡು ದಿನದ ಈ ಸಮ್ಮೇಳನಕ್ಕೆ ನಗರ ಮತ್ತು ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯಾಧ್ಯಕ್ಷ ಅಸಗೂಡು ಜಯಸಿಂಹ, ಧಾರ್ಮಿಕ ಮುಖಂಡರಾದ ವೇದ ಬ್ರಹ್ಮ ಶ್ರೀ ಭಾನುಪ್ರಕಾಶ್ ಶರ್ಮ, ಮೈಸೂರು ಶಂಕರ ಮಠದ ಆಡಳಿತ ಅಧಿಕಾರಿ ರಾಮಚಂದ್ರರಾವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್ ಸೇರಿದಂತೆ ಹಲವು ನಾಯಕರು ಇದ್ದರು.