ಮೈಸೂರು- 71ನೇ ಸ್ವಾತಂತ್ರ ದಿನಾಚರಣೆಯನ್ನ ತುಂತುರು ಮಳೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಧ್ವಜಾರೋಹಣ ಮಾಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಇಂದು ನಗರದ ಬನ್ನಿಮಂಟಪದ ಪಂಜಿನಕವಾಯಿತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ ಮಹದೇವಪ್ಪ ತುಂತುರು ಮಳೆಯಲ್ಲೂ 71ನೇ ಸ್ವಾತಂತ್ರ ದಿನಾಚರಣೆಗೆ ಧ್ವಜಾರೋಹಣ ಮಾಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಂತರ ಮಾತನಾಡಿದ ಸಚಿವರು, ಸಂವಿಧಾನ ಆಶಯಗಳಾದ ಸಮಾನತೆ, ಸರ್ವಧರ್ಮ, ಸಹಿಷ್ಣುತೆ , ಸಾಮಾಜಿಕ ಸಾಮಾರಸ್ಯ ಸಮಾಜದಲ್ಲಿ ತರಲು ಪ್ರಯತ್ನಿಸಬೇಕು. ಸ್ವಾತಂತ್ರ್ಯ ಕ್ಕಾಗಿ ಬಲಿದಾನ ಮಾಡಿದ ವೀರರನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಅಪ್ರತಿಮ ನಾಯಕರ ಜೀವನ ನಮಗೆ ಮಾರ್ಗದರ್ಶನವಾಗಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದ ಐಕ್ಯತೆ ಹಾಗೂ ವಿದೇಶಗಳ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಬಲಿಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕಾರ್ಯಗತರಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗರಿಷ್ಠ ಅಂಕ ಪಡೆದ ಹುಣಸೂರು ತಾಲ್ಲೂಕು ಗೌಡಗೆರೆ ವಿದ್ಯಾರ್ಥಿನಿ ಪೂಜಾ ಎಂ, ಹೆಚ್.ಡಿ.ಕೋಟೆಯ ಯರಹಳ್ಳಿ ಹ್ಯಾಂಡ್ ಪೋಸ್ಟ್ ವಿದ್ಯಾರ್ಥಿನಿ ಸುಶ್ಮ ಬಿ.ಎನ್, ಮೈಸೂರು ತಾಲ್ಲೂಕು ಬೀರಿಹುಂಡಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಕೆ, ಹುಣಸೂರು ತಾಲ್ಲೂಕು ಗುರುಪುರದ ವಿದ್ಯಾರ್ಥಿ ಹೃತಿಕ್ ಬಿ ಹಾಗೂ ಮೈಸೂರು ತಾಲ್ಲೂಕು ಕಲ್ಲಹಳ್ಳಿಯ ವಿದ್ಯಾರ್ಥಿ ರಮೇಶ್ ಸಿ.ಕೆ ಒಟ್ಟು 5 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು.
ಪಥಸಂಚಲನ ರದ್ದು:ನಿನ್ನೆ ಇಡೀ ರಾತ್ರಿ ಸುರಿದ ಭಾರಿ ಮಳೆಗೆ ಪಂಜಿನ ಕಾವಾಯಿತು ಮೈದಾನದಲ್ಲಿ ನೀರು ತುಂಬಿಕೊಂಡಿದ್ದ ಹಿನ್ನಲ್ಲೆಯಲ್ಲಿ ಪಥ ಸಂಚಲನ ನಡೆಸಲು ಕಷ್ಟವಾದ ಕಾರಣ ವಿಶೇಷ ಸಂದರ್ಭಗಳಲ್ಲಿ ಪಥಸಂಚಲನವನ್ನು ರದ್ದುಪಡಿಸಲು ಅವಕಾಶವಿರುವುದರಿಂದ ಪಥಸಂಚಲನಕ್ಕೆ ಸಿದ್ಧವಾಗಿದ್ದ ಪೊಲೀಸ್ ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಶ್ವರೋಹಿಪಡೆ ಹಾಗೂ ವಿವಿಧ ತುಕಡಿಗಳು ಪಥಸಂಚಲನ ಮಾಡಲಾಗದೆ ಉಸ್ತುವಾರಿ ಸಚಿವರಿಗೆ ಗೌರವ ಸಲ್ಲಿಸಿ ಸಚಿವರ ಅನುಮತಿ ಪಡೆದು ಪಥಸಂಚಲನ ನಡೆಸದೆ ನಿರ್ಗಮಿಸಿದರು.
ಮಳೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮ:ತುಂತುರು ಮಳೆಯನ್ನ ಲೆಕ್ಕಿಸದೆ ಸುರಿಯುವ ಮಳೆಯಲ್ಲೇ ಶಕ್ತಿನಗರದ ಅಧ್ಯಯನ ಪ್ರೌಢಶಾಲೆ ಮಕ್ಕಳು ನೇಗಿಲಯೋಗಿ ಹಾಡಿಗೆ ಭಾವೈಕ್ಯತಾ ನೃತ್ಯ, ಎನ್.ಆರ್.ಮೊಹಲ್ಲಾದ ಸೆಂಟ್ ಆನ್ಸ್ ಶಾಲಾ ಮಕ್ಕಳು ಸಾಮಾಜಿಕ ಪಿಡುಗಿಗೆ ಸಂಭಂದಿಸಿದಂತೆ ನೃತ್ಯ ರೂಪಕ, ಪೀಪಲ್ಸ್ ಪಾರ್ಕ್ ನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳು ಭಾರತಾಂಬೆ ನಿನ್ನ ಜನ್ಮ ದಿನ ಹಾಡಿಗೆ ಭಾವೈಕ್ಯತಾ ನೃತ್ಯ ಹಾಗೂ ನಗರ ಹಾಗೂ ತಾಲ್ಲೂಕು ವಲಯದ ವಿವಿಧ ಶಾಳಾ ಮಕ್ಕಳು ವಿವಿಧತೆಯಲ್ಲಿ ಏಕತೆಯ ನೃತ್ಯ ರೂಪಕ ಪ್ರದರ್ಶಿಸಿದರು.