ಭಾರತೀನಗರ: ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹೊರ ವಲಯದಲ್ಲಿರುವ ಸೂಳೆಕೆರೆ ಮತ್ತು ನಾಲೆಯನ್ನು ಅಭಿವೃದ್ಧಿ ಗೊಳಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೈಕ್ ನಲ್ಲಿ ಸಂಚರಿಸಿ ಕೆರೆ ಮತ್ತು ನಾಲೆಯನ್ನು ವೀಕ್ಷಣೆ ಮಾಡಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ ಅವರು, ಕೆರೆಯಲ್ಲಿ ಬೆಳೆದಿರುವ ಜೊಂಡುಗಳನ್ನು ತೆರವುಗೊಳಿಸದಿದ್ದರೆ ಕೆರೆಗೆ ನೀರು ತುಂಬಿಕೊಂಡಾಗ ನಾಲೆಗಳಿಗೆ ನೀರು ಸಾಗದೆ ಕೆರೆಯ ಆಜು ಬಾಜಿನಲ್ಲಿರುವ ಜಮೀನುಗಳಿಗೆ ನೀರುನುಗ್ಗಿ ರೈತರ ಬೆಳೆಗಳು ನಷ್ಟವಾಗುತ್ತವೆ. ಹಾಗಾಗಿ ಕೂಡಲೇ ಕೆರೆಯಲ್ಲಿರುವ ಜೊಂಡುಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರಲ್ಲದೆ, ಸ್ಥಳೀಯ ರೈತರಿಂದ ಮತ್ತು ಕಾವೇರಿ ನೀರಾವರಿ ನಿಗಮದ ಸವಡೆಗಳಿಂದ ಜೊಂಡನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಹಾಗಾಗಿ ಕೆರೆ ವೀಕ್ಷಣೆಗೆ ಬಂದಿರುವುದಾಗಿ ಅವರು ಹೇಳಿದರು.
ಬೆಂಗಳೂರಿನ ಬೆಳಂದೂರು ಕೆರೆಯಲ್ಲಿ ಹೇಗೆ ಜೊಂಡನ್ನು ತೆಗೆಯಲು ವೀಡ್ ಕಟ್ಟರ್ ಬೋಟ್ ಉಪಯೋಗಿಸುತ್ತಾರೆಯೋ ಹಾಗೆಯೇ ಇಲ್ಲಿ ಕೂಡ ಜೊಂಡುಗಳನ್ನು ತೆಗೆಯಲು ವೀಡ್ಕಟ್ಟರ್ ಬೋಟ್ಗೆ ಅನುದಾನಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಶಾಶ್ವತ ಪರಿಹಾರ ಸಿಗಲಿದೆ. ಸೂಳೆಕೆರೆ ನಾಲೆ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿರುವಂತಹದ್ದಾಗಿದೆ. ಇದನ್ನು ಅಭಿವೃದ್ದಿ ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುಮಾರು 938ಎಕರೆ ವಿಶಾಲ ವಿಸ್ತೀರ್ಣ ಹೊಂದಿರುವ ಈ ಕೆರೆ 48 ರಿಂದ 50 ಎಕೆರೆಯಷ್ಟು ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಕೆರೆಯ ಮೇಲಿನ ಸಾಮರ್ಥ್ಯ 401 ಮಿಲಿಯನ್ ಕ್ಯೂಬಿಕ್ ಫೀಟ್ ಆಗಿದ್ದು, 1.20 ಕೋಟಿ ರೂ ವೆಚ್ಚದಲ್ಲಿ ಸೂಳೆಕೆರೆ ನಾಲೆಗಳ 12 ಸೇತುವೆಗಳನ್ನು ಮರುನಿರ್ಮಾಣ ಮಾಡಲಾಗಿದ್ದು, ದಕ್ಷಿಣ ನಾಲೆಯಿಂದ 3930 ಎಕೆರೆ ಪ್ರದೇಶಕ್ಕೆ ನೀರುಣಿಸಿದರೆ, ಉತ್ತರ ನಾಲೆಯಿಂದ 2700 ಎಕರೆ ಜಮೀನಿಗೆ ನೀರು ಲಭ್ಯವಾಗುತ್ತಿದೆ. ಆದರೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಸಂಗ್ರಹ ಸಾಮರ್ಥ್ಯದಲ್ಲಿ ಕೊಂಚ ಕಡಿಮೆಯಾಗಿದ್ದು, ಈ ಹೂಳು ತೆಗೆಯಲು ಸರ್ಕಾರಕ್ಕೆ ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದಲ್ಲದೆ ಉತ್ತರ ಮತ್ತು ದಕ್ಷಿಣ ನಾಲೆಗಳ ಆಧುನೀಕಣ ಕಾಮಗಾರಿ ಮತ್ತು ಸೂಳೆಕೆರೆ ಅಭಿವೃದ್ದಿಗೆ 125 ಕೋಟಿ ರೂ ಅವಶ್ಯಕತೆ ಇದೆ. ಇದನ್ನು ಸರ್ಕಾರ ಮಂಜೂರು ಮಾಡಿಸಿದರೆ ಅಭಿವೃದ್ಧಿಗೊಳಿಸಬಹುದು ಎಂದರು.
ಮಂಡ್ಯ ಜಿಲ್ಲೆಯಲ್ಲೇ ದೊಡ್ಡ ಕೆರೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಈ ಸೂಳೆಕೆರೆಯ ಎಡ ಮತ್ತು ಬಲದಂಡೆ ನಾಲೆಗಳು, ಶಿಥಿಲಗೊಂಡಿದ್ದ 12 ಸೇತುವೆಗಳು ಹಾಗೂ ಮೆಟ್ಟಿಲುಗಳನ್ನು ಮರು ನಿರ್ಮಾಣ ಗೊಳಿಸಲಾಗಿದ್ದು, ಕೆರೆಯು ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ ಎಂದರು.
ಸರ್ಕಾರ ರೈತರನ್ನು ಉಳಿಸಬೇಕಾದರೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮದ್ದೂರು ಕೆಮ್ಮಣ್ಣು ಕೆರೆ ಮತ್ತು ಸೂಳೆಕೆರೆ ಈ ಎರಡು ಕೆರೆಗಳು ಈ ಭಾಗದ ರೈತರಿಗೆ ಮಿನಿ ಅಣೆಕಟ್ಟೆ ಇದ್ದಂತೆ. ಕೆಆರ್ಎಸ್ ಅಣೆಕಟ್ಟೆ ಬಿಟ್ಟರೆ ಇದು ರೈತರಿಗೆ ಎರಡನೇ ಅಣೆಕಟ್ಟೆ ಇದ್ದಂತೆ. ಈ ಎರಡು ಕೆರೆ ಅಭಿವೃದ್ದಿ ಮತ್ತು ನಾಲೆ ಅಭಿವೃದ್ಧಿಗೆ ಕನಿಷ್ಟ 250 ಕೋಟಿ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರ ಈಗಲಾದರೂ ಕಣ್ತೆರೆದು ಮಂಜೂರುಗೊಳಿಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು. ಇದೇ ವೇಳೆ ಕೆರೆ ಏರಿಮೇಲೆ ಬೈಕ್ನಲ್ಲಿ ಸಂಚರಿಸಿ ವೀಕ್ಷಿಸಿದಲ್ಲದೆ, ನಾಲೆಯ ಮೆಟ್ಟಿಲುಗಳಲ್ಲಿ ನಡೆದು ಪರಿಶೀಲಿಸಿದರು.