ಮೈಸೂರು: ವೈದ್ಯರು ವೃತ್ತಿ ಗೌರವ ಕಾಪಾಡುವುದರೊಂದಿಗೆ ಬಡವರಿಗೆ, ಅಸಹಾಯಕರಿಗೆ ಕೈಲಾದ ಸಹಾಯ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮಾಜಿ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಹೇಳಿದರು.
ಮುಕ್ತಗಂಗೋತ್ರಿಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ಮೈಸೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 93ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿ, ವೈದ್ಯರಾದವರು ಹಣದ ಹಿಂದೆ ಓಡದೇ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು. ವೈದ್ಯರಾದ ಕೂಡಲೇ ಅನಗತ್ಯವಾಗಿ ಡಯಾಗ್ನಾಸ್ಟಿಕ್ ಸೆಂಟರ್ ತೆಗೆದು ಹಣ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಡಿ. ನಿಮಗೆ ಒಳ್ಳೆಯ ವೃತ್ತಿ ಸಿಕ್ಕಿದೆ. ಅದನ್ನು ಹಾಳು ಮಾಡಿಕೊಳ್ಳಬೇಡಿ. ಹಣ ಗಳಿಕೆಯೇ ನಿಮ್ಮ ಉzಶವಾಗದಿರಲಿ ಎಂದು ಕಿವಿ ಮಾತು ಹೇಳಿದರು.
ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಜೀವವನ್ನು ಉಳಿಸುವುದೇ ನಿಜವಾದ ವೈದ್ಯನ ಕರ್ತವ್ಯವಾಗಿದೆ. ನನ್ನ ತಂದೆ ವೈದ್ಯರಾಗಿದ್ದರು. ಅವರು ನನ್ನ ದೇವರು ಗುಡಿ, ಚರ್ಚ್, ಮಸೀದಿಯಲ್ಲಿಲ್ಲ. ರೋಗಿಗಳಲ್ಲಿ ದೇವರನ್ನು ಕಾಣುತ್ತೇನೆ ಎಂದು ಹೇಳುತ್ತಿದ್ದರು. ಹಣ ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು. ಆದರೆ, ಆರೋಗ್ಯ ಕಳೆದುಕೊಂಡರೇ ವ್ಯಕ್ತಿ ಧೈರ್ಯ ಕಳೆದುಕೊಳ್ಳುತ್ತಾನೆ. ಹೀಗಾಗಿ, ರೋಗಿಗೆ ವೈದ್ಯರೇ ದೇವರು ಎಂದು ಅಭಿಪ್ರಾಯಪಟ್ಟರು.
ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಸಂಬಂಧ ಇರಬೇಕು. ವೈದ್ಯರ ಕೆಲಸ ಜೀವದಾನ ಮಾಡುವುದು, ಜೀವ ತೆಗೆಯುವುದಲ್ಲ. ಯಾವುದೇ ವೈದ್ಯಕಾಲೇಜಿನಲ್ಲಿ ಬೃಹತ್ ಕಟ್ಟಡ ನಿರ್ಮಿಸುವುದೇ ಗುರಿಯಾಗಬಾರದು. ವಿದ್ಯಾರ್ಥಿಗಳ ಶೈPಣಿಕ ಅಧ್ಯಯನಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಘಟಿಕೋತ್ಸವದಲ್ಲಿ 2016ನೇ ಸಾಲಿನಲ್ಲಿ ಪ್ರವೇಶ ಪಡೆದು, ಪದವಿ ಪೂರೈಸಿರುವ 150 ವಿದ್ಯಾರ್ಥಿಗಳಿಗೆ ಮೂರ್ತಿ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಪದವಿ ಪ್ರದಾನ ಮಾಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಆರ್. ದಾಕ್ಷಾಯಣಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ. ಶೇಖರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವಿಶ್ರಾಂತ ಕುಲಪತಿ ಡಾ.ಎಸ್. ಚಂದ್ರಶೇಖರ್ ಶೆಟ್ಟಿ, ಮೈಸೂರು ವೈದ್ಯ ಕಾಲೇಜು ಡೀನ್ ಡಾ.ಎಚ್.ಎನ್. ದಿನೇಶ್, ಪ್ರಾಂಶುಪಾಲರಾದ ಡಾ.ಕೆ.ಆರ್.ದಾಕ್ಷಾಯಣಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಡಾ.ಎಚ್.ಬಿ. ಶಶಿಧರ್ ಹಾಜರಿದ್ದರು.