ಕೆ.ಆರ್.ನಗರ: ಸರ್ಕಾರದ ಸಹಾಯಧನದಡಿಯಲ್ಲಿ ರಾಗಿ ಖರೀದಿ ಮಾಡಲಾಗುತ್ತಿದ್ದು, ಖರೀದಿ ಕೇಂದ್ರದಲ್ಲಿ ಅಕ್ರಮ ನಡೆದರೆ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಹಶೀಲ್ದಾರ್ ಎಸ್.ಸಂತೋಷ್ ಎಚ್ಚರಿಕೆ ನೀಡಿದ್ದಾರೆ.
ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ರೈತರಿಂದ ಆಹವಾಲು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ನಿಯಾಮಾನುಸಾರ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ರೈತರು ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಲು ಸರ್ಕಾರದ ನಿಯಮಾನುಸಾರ ವೇಬಿಡ್ಜ್ನಲ್ಲಿ ತೂಕ ಮಾಡಿ ನೀಡಬೇಕು ಆದರೆ ಖರೀದಿ ಕೇಂದ್ರದ ಅಧಿಕಾರಿಗಳು ರೈತರನ್ನು ದಾರಿ ತಪ್ಪಿಸಿ 52 ಕೆ.ಜಿ. ತೂಕದ ಮೂಟೆಗಳನ್ನೇ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಜತೆಗೆ ಖಾಲಿ ಚೀಲದ ಹಣವನ್ನು ರೈತರಿಗೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ ಎಂದು ತಿಳಿಸಿದರು.
ರಾಗಿ ಕೇಂದ್ರದ ಅಧಿಕಾರಿಗಳು ಎಪಿಎಂಸಿಯ ವೇಬಿಡ್ಜ್ನಲ್ಲೇ ತೂಕ ಹಾಕಿ ತರಬೇಕು ಎಂದು ರೈತರಿಗೆ ಗೊಂದಲ ಸೃಷ್ಠಿ ಮಾಡಿರುವುದಲ್ಲದೆ ಪ್ರತಿ ಮೂಟೆಗೆ 100 ರೂ ಲಂಚ ನೀಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬರಲಾಗಿದೆ ಎಂದು ತಿಳಿಸಿದ ತಹಶೀಲ್ದಾರ್ ಸಂತೋಷ್ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.
ಸರ್ಕಾರದ ನಿಯಮಾನುಸಾರ ರೈತರಿಂದ ಬಂದ ರಾಗಿಯನ್ನು ಕೃಷಿ ಇಲಾಖೆಯವರು ಅದರ ಗುಣಮಟ್ಟ ಪರಿಶೀಲಿಸಿ ಆನಂತರ ದಾಸ್ತಾನು ಮಾಡಬೇಕು ಆದರೆ ಚುಂಚನಕಟ್ಟೆ, ಸಾಲಿಗ್ರಾಮ ಮತ್ತು ಕೆ.ಆರ್.ನಗರ ಖರೀದಿ ಕೇಂದ್ರಗಳಿಗೆ ಕೃಷಿ ಇಲಾಖೆಯಿಂದ ನೇಮಕ ಮಾಡಲಾದ ಯಾವ ಅಧಿಕಾರಿಯೂ ಸ್ಥಳದಲ್ಲಿಲ್ಲ ಇದರಿಂದ ಇವರುಗಳು ಸಹ ಖರೀದಿ ಕೇಂದ್ರ ಅಧಿಕಾರಿಯೊಂದಿಗೆ ಶಾಮೀಲಾಗಿರುವುದು ಸಾಬೀತಾಗಿದೆ ಇವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.