ಮೈಸೂರು: ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವಾಸಿಗರನ್ನು ಆಕರ್ಷಿಸಲು ನೂತನ ಸಫಾರಿಯೊಂದನ್ನು ಆರಂಬಿಸಲು ಸಿದ್ದತೆ ನಡೆಸಿದ್ದಾರೆ. ರಾಜ್ಯದ ಜನಪ್ರಿಯ ವನ್ಯಜೀವಿ ತಾಣವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಮೀಪದ ಬಫರ್ ಝೋನ್ ನಲ್ಲಿ ಸಫಾರಿ ಆರಂಬಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ನಾಗರಹೊಳೆ ಉದ್ಯಾನವನದ ವೀರನಹೊಸಳ್ಳಿ ಹಾಗೂ ಅಂತರಸಂತೆಯಲ್ಲಿ ಸಫಾರಿ ನಡೆಸಲಾಗುತ್ತಿದೆ. ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದಲ್ಲಿ ಜನವರಿಯಿಂದ ನಾಗರಹೊಳೆ ಬಫರ್ ಝೋನ್ನಲ್ಲಿ ಹೊಸ ಸಫಾರಿ ಆರಂಭಗೊಳ್ಳಲಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕೊಡಗು ಜಿಲ್ಲಾ ವ್ಯಾಪ್ತಿಯುಲ್ಲಿ ಸುಮಾರು 200 ಚ.ಕಿ.ಮೀ. ವ್ಯಾಪ್ತಿಯ ಬಫರ್ ಝೋನ್ (ದಟ್ಟಾರಣ್ಯದ ಹೊರವಲಯದ ಅರಣ್ಯ ) ಹೊಂದಿದೆ. ಈ ಬಫರ್ ಜೋನ್ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು ಇಲ್ಲಿಯೂ ಸಾಕಷ್ಟು ವನ್ಯಜೀವಿಗಳ ಓಡಾಟ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾಗರಹೊಳೆ ಉದ್ಯಾನವನದ ಅರಣ್ಯ ಇಲಾಖೆ ಅಧಿಕಾರಿಗಳು ಕೊಡಗಿನ ಬಫರ್ ಝೋನ್ನಲ್ಲಿ ಸಫಾರಿ ಆರಂಭಿಸಲು ಅನುಮತಿ ಕೋರಿ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈಗ ಈ ಬಫರ್ ಜೋನ್ ನ್ನು ಅರಣ್ಯ ಬೆಳೆಸಲು , ನೀರು ಸಂಗ್ರಹ ಮಾಡಲಷ್ಟೇ ಬಳಕೆ ಮಾಡಲಾಗುತ್ತಿದೆ. ಇದನ್ನು ಕಾಡಿನ ಸರಹದ್ದಿನೊಳಗೆ ತಂದರೆ ವನ್ಯಜೀವಿ ಆವಾಸ ಸ್ಥಾನ ವಿಸ್ತರಣೆ ಮಾಡಬಹುದಲ್ಲದೆ ಅರಣ್ಯ ಅಪರಾಧ ಮತ್ತು ಕಳ್ಳ ಬೇಟೆ ತಡೆಗೂ ಕಡಿವಾಣ ಹಾಕಬಹುದಾಗಿದೆ ಎಂದು ಅರಣ್ಯ ಅಧಿಕಾರಿಗಳ ಆಲೋಚನೆ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ , ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಒಟ್ಟು 384 ಚದರ ಕಿಲೋಮೀಟರ್ ಗಳಷ್ಟು ಬಫರ್ ಜೋನ್ ಇದ್ದು ಇದನ್ನೂ ಕೊಡಗಿನ ಬಫರ್ ಝೋನ್ ಜತೆಯಲ್ಲಿಯೇ 2012 ನೇ ಇಸವಿಯಲ್ಲಿಯೇ ಬಫರ್ ಜೋನ್ ಎಂದು ಘೋಷಣೆ ಮಾಡಲಾಗಿದೆ.
ಅರಣ್ಯ ಇಲಾಖೆಯು ಆಡಳಿತಾತ್ಮಕ ದೃಷ್ಟಿಯಿಂದ ಅರಣ್ಯವನ್ನು ಕೋರ್ ಜೋನ್ ಮತ್ತು ಬಫರ್ ಝೋನ್ ಎಂಬುದಾಗಿ ವಿಂಗಡಿಸಿಕೊಂಡಿದ್ದು ಈ ಬಫರ್ ಝೋನ್ ಕೂಡ ಮೀಸಲು ಅರಣ್ಯವೇ ಆಗಿದೆ. ಈ ಕುರಿತು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮತ್ತು ಡಿಸಿಎಫ್ ಡಿ ಮಹೇಶ್ ಕುಮಾರ್ ಅವರೊಂದಿಗೆ ಈ ವರದಿಗಾರ ಮಾತನಾಡಿದಾಗ “ಝೋನ್ಗೆ ಬೇಕಾದ ಸೌಲಭ್ಯ, ಕೊಠಡಿ, ಸಿಬ್ಬಂದಿ, ವಾಹನ, ಸಫಾರಿ ಮಾರ್ಗ ಮುಂತಾದವುಗಳ ಬಗ್ಗೆ ವರದಿ ತಯಾರಿಸಿ ಪಿಸಿಸಿಎಫ್ಗೆ ಕಳುಹಿಸಿಕೊಡಲಾಗಿದೆ. ಅವರು ಪರಿಶೀಲಿಸಿ ಅನುಮತಿ ಕೊಟ್ಟರೆ ಜನವರಿಯಲ್ಲಿ ಸಫಾರಿ ಆರಂಭಿಸುವ ಚಿಂತನೆ ಇದೆ” ಎಂದರು.
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವೀರನಹೊಸಹಳ್ಳಿ ಹಾಗೂ ಆನೆಚೌಕೂರು ಎರಡೂ ಗೇಟ್ ಗಳಲ್ಲಿ ಸಫಾರಿ ನಡೆಯುತ್ತಿದ್ದು, ಪ್ರತಿ ವರ್ಷ ಸುಮಾರು 5 ಕೋಟಿ ರೂ.ಗಳಷ್ಟು ಆದಾಯ ಬರುತ್ತಿತ್ತು. ಕೋವಿಡ್ ಮೊದಲನೇ ಹಾಗೂ 2ನೇ ಅಲೆಯ ನಂತರ ಶೇ 40ರಷ್ಟು ಆದಾಯ ಕುಂಠಿತವಾಗಿದೆ. ಬಫರ್ ಝೋನ್ ಸಫಾರಿ ಆರಂಭಿಸುವುದರಿಂದ ಆದಾಯ ಹೆಚ್ಚಳವಾಗಲಿದೆ. ಜೊತೆಗೆ ಸ್ಥಳೀಯರಿಗೆ ಮತ್ತಷ್ಟು ಉದ್ಯೋಗ ನೀಡಲು ಸಹಕಾರಿಯಾಗುತ್ತದೆ” ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ. ನೂತನ ಬಫರ್ ಝೋನ್ ಸಫಾರಿಯ ಕೇಂದ್ರ ಎಲ್ಲಿ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ಅನುಮತಿ ದೊರೆತ ನಂತರವಷ್ಟೆ ಇದನ್ನು ಮಾಧ್ಯಮಕ್ಕೆ ತಿಳಿಸಲಾಗುವುದು ಎಂದರು.
ಈ ನೂತನ ಸಫಾರಿ ಪ್ರಾರಂಭದಿಂದ ಸುತ್ತ ಮುತ್ತಲಿನ ಗ್ರಾಮದ ಜನತೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಸಹಜವಾಗೇ ಪ್ರವಾಸಿಗರ ಓಡಾಟ ಹೆಚ್ಚಲಿದೆ. ಇದರಿಂದಾಗಿ ಸಫಾರಿ ಪ್ರದೆಶದ ಸುತ್ತಮುತ್ತಲಿನ ಹೋಂ ಸ್ಟೇ ಗಳಿಗೆ ಬುಕಿಂಗ್ ಹೆಚ್ಚಾಗಲಿದೆ.
ಸಾಮಾನ್ಯವಾಗಿ ಕಾಡಿನ ಒಳಗೆ ಕೋರ್ ಜೋನ್ನಲ್ಲಿ ಸಫಾರಿ ನಡೆಸುವುದು ವಾಡಿಕೆ. ಹುಲಿ ಸಂರಕ್ಷಣಾ ಯೋಜನೆಯಲ್ಲಿ ಬಫರ್ ಜೋನ್ನಲ್ಲಿ ಸಫಾರಿ ನಡೆಸಲು ಈಗಾಗಲೇ ಶಿಫಾರಸು ಮಾಡಲಾಗಿದೆ. ಅದನ್ನು ಜಾರಿಗೊಳಿಸಬೇಕಾದರೆ ಪಿಸಿಸಿಎಫ್ ಅನುಮತಿ ಬೇಕು. ಈ ಅನುಮತಿ ಸಿಕ್ಕಿದರೆ ರಾಜ್ಯದಲ್ಲೇ ಬಫರ್ಜೋನ್ನಲ್ಲಿ ಸಫಾರಿ ಆಗುತ್ತಿರುವ ಮೊದಲ ಅರಣ್ಯ ಪ್ರದೇಶ ನಾಗರಹೊಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಉತ್ತರ ಭಾರತದ ಅನೇಕ ಅರಣ್ಯಗಳ ಬಫರ್ ಝೋನ್ ನಲ್ಲಿ ಈಗಾಗಲೇ ಸಫಾರಿ ನಡೆಸಲಾಗುತ್ತಿದೆ. ಆದರೆ, ದಕ್ಷಿಣ ಭಾರತದ ಮಟ್ಟಿಗೆ ಮಾತ್ರ ಇದು ಹೊಸದಾಗಿದೆ.