ಮೈಸೂರು: ಅಗಲಿದ ಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಚಿಕ್ಕವಯಸ್ಸಿನಲ್ಲೇ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದ ಕನ್ನಡಿಗರ ಕಣ್ಮಣಿ, ಯುವ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಇಡೀ ಕರುನಾಡು ಮಾತ್ರವಲ್ಲದೇ, ಅಸಂಖ್ಯಾತ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ಪುನೀತ್ ರಾಜ್ಕುಮಾರ್ ಅವರು ಕೇವಲ ನಟನೆಯಿಂದ ಮಾತ್ರ ಗುರುತಿಸಿಕೊಂಡವರಲ್ಲ, ಅವರೊಬ್ಬ ಸಾಮಾಜಿಕ ಬದ್ಧತೆಯುಳ್ಳ ನಾಗರಿಕರಾಗಿದ್ದರು. ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಪರಿಶುದ್ಧ ಮನಸ್ಸಿನ ವ್ಯಕ್ತಿತ್ವವುಳ್ಳವರು. ಇಂಥ ಪ್ರತಿಭಾನ್ವಿತ ವ್ಯಕ್ತಿಯನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕವಾಗಿಯೂ ಸಹ ನಷ್ಟ ಎಂದು ಹೇಳಿದ್ದಾರೆ.
ಪುನೀತ್ರಾಜ್ ಕುಮಾರ್ ಅವರ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತು ಎಂಬುದು ಅವರ ಅಂತಿಮ ದರ್ಶನದ ವೇಳೆ ಮತ್ತೊಮ್ಮೆ ಸಾಬೀತಾಗಿದೆ. 22 ಲಕ್ಷಕ್ಕೂ ಹೆಚ್ಚು ಮಂದಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದೇ ಸಾಕ್ಷಿ. ಇನ್ನೂ ಸಹ ಅವರ ಸಮಾಧಿಗೆ ನಿರಂತರವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬರುತ್ತಿರುವುದನ್ನು ನೋಡುತ್ತೇವೆ. ಇಂತಹ ಒಬ್ಬ ವ್ಯಕ್ತಿಗೆ ಗೌರವ ಸೂಚಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಪದ್ಮಭೂಷಣ ಡಾ. ರಾಜಕುಮಾರ್ ಅವರ ಮಾರ್ಗದಲ್ಲೇ ನಡೆಯುತ್ತಿದ್ದ ಪುನೀತ್ ಅವರು, ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮಾಜದ ಬಡ ವರ್ಗ ರೈತರ ಮೇಲೆ ಅಪಾರ ಕಾಳಜಿ ಹೊಂದಿದ್ದ ಅವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಎಂಎಫ್ ರಾಯಭಾರಿ ಜವಾಬ್ದಾರಿಯನ್ನು ನಿರ್ವಹಿಸಿದರು.
ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಕನಸು ಕಂಡಿದ್ದ ಪುನೀತ್ ಅವರು ಚಾಮರಾಜನಗರ ಪ್ರವಾಸೋದ್ಯಮ ಅಭಿವೃದ್ಧಿಗೂ ರಾಯಭಾರಿಯಾಗಿದ್ದರು. ಮೈಸೂರು ಜಿಲ್ಲೆಯಲ್ಲೂ ಸಹ ಅವರ ಸೇವೆ ಬಹಳಷ್ಟಿದೆ.
ಮೈಸೂರಿನಲ್ಲಿ ಶಕ್ತಿಧಾಮ ಸ್ಥಾಪನೆ ಮಾಡಿರುವ ವರನಟ ಡಾ. ರಾಜಕುಮಾರ್ ಅವರ ಆಶಯವನ್ನು ಎತ್ತಿ ಹಿಡಿಯಲು ಸಾಕಷ್ಟು ಶ್ರಮಿಸಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದ ಅವರು, ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಒದಗಿಸಿದ್ದಾರೆ. ಇಂತಹ ಸರಳ, ವಿನಯವಂತ ವ್ಯಕ್ತಿಯನ್ನು ಕನ್ನಡಿಗರಾದ ನಾವು ಎಂದೆAದೂ ಸ್ಮರಿಸಬೇಕು ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಿಗೆ ನಾವೀಗ ಮೈಸೂರಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಬೇಕಿದೆ. ಸಂಘಟನೆಗಳಾದ ವರನಟ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘಗಳ ಸಹಕಾರದೊಂದಿಗೆ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸೋಣ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ. ಜೊತೆಗೆ ಕನ್ನಡ ಸಂಘಟನೆಗಳ ಸಹಕಾರವನ್ನು ಪಡೆಯೋಣ.
ನುಡಿನಮನ ಕಾರ್ಯಕ್ರಮಕ್ಕೆ ಕನ್ನಡ ಸಂಘಟನೆಯವರು, ಮಹಿಳೆಯರ ಸಬಲೀಕರಣಕ್ಕೆ ರಾಜಕುಮಾರ್ ಕುಟುಂಬದವರು ತೆರೆದಿರುವ “ಶಕ್ತಿಧಾಮ”ದ ಸದಸ್ಯರು, ಸಿಬ್ಬಂದಿ, ಆಡಳಿತ ವರ್ಗದವರು ಸೇರಿದಂತೆ ಕಲಾವಿದರು, ಅಪಾರ ಅಭಿಮಾನಿಗಳು ಆಗಮಿಸುವುದರಿಂದ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವುದರ ಜೊತೆಗೆ ಈ ಕಾರ್ಯಕ್ರಮದ ಮೂಲಕ ಪುನೀತ್ ಅವರ ಸಾಮಾಜಿಕ ಕಳಕಳಿಯನ್ನು ಜನತೆಗೆ ತಿಳಿಸುವ ಕಾರ್ಯವನ್ನು ಮಾಡೋಣ. ಇದಕ್ಕಾಗಿ ಎಲ್ಲಾ ಅಭಿಮಾನಿಗಳ ಸಹಕಾರವನ್ನು ಕೋರುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.