ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆಯ ರಂಗೇರಿದ್ದು, ಒಂದೆಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದ್ದರೆ, ಇನ್ನೊಂದೆಡೆ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಅವರು ನಾಮಪತ್ರ ಸಲ್ಲಿಕೆ ವೇಳೆ ಜನರಿಂದಲೇ ಹಣ ಸಂಗ್ರಹಿಸಿ ಠೇವಣಿ ಹಣ ಕಟ್ಟಿರುವುದು ವಿಶೇಷವಾಗಿದೆ.
ಪುರಭವನದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ಮಹಿಳೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು 10, 20, 50, 100, 500 ಮುಖಬೆಲೆಯ ನೋಟುಗಳನ್ನು ಜೋಳಿಗೆಗೆ ಹಾಕಿ ಬೆಂಬಲ ಸೂಚಿಸಿದರು
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಹಣ ಹಾಕಿ ಚಾಲನೆ ನೀಡಿದ್ದು, ಸುಮಾರು 18,500 ರೂ. ಸಂಗ್ರಹವಾಯಿತು. ನಾಲ್ಕು ಜಿಲ್ಲೆಗಳ ಪ್ರಚಾರದ ವೇಳೆ ರೈತರು, ಮಹಿಳೆಯರು ಮತದ ಜತೆಗೆ ಹಣವನ್ನು ನೀಡುವ ಭರವಸೆ ನೀಡಿದರು.
ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಪ್ರಸನ್ನ ಗೌಡ ಅವರು ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿದ್ದರೆಂದು ತಿಳಿದಾಗ ಈ ಕ್ಷೇತ್ರಕ್ಕೆ ತಕ್ಕನಾದ ಅಭ್ಯರ್ಥಿ ಸಿಕ್ಕಿದ ಅನಿಸಿತು. ತುಂಬಾ ಹಿಂದಿನಿಂದಲೂ ಪ್ರಸನ್ನ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ಅವರಲ್ಲಿ ಎದ್ದು ಕಾಣುವ ಗುಣ ಎಂದರೆ ರಚನಾತ್ಮಕ ಕ್ರಿಯಾಶೀಲತೆ ಮತ್ತು ಸಂಘಟನಾ ಸಾಮರ್ಥ್ಯವಿದೆ ಎಂದರಲ್ಲದೆ, ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.