ಮೈಸೂರು: ಕೊರೊನಾ ವಕ್ಕರಿಸುವ ಮುನ್ನ ಮೈಸೂರು ದಸರಾ ಅಂದ್ರೆ ಸಾಕು ಒಂದೆರಡು ತಿಂಗಳ ಮೊದಲೇ ಸಂಭ್ರಮ ಮನೆ ಮಾಡಿಬಿಡುತ್ತಿತ್ತು. ಮನೆಗಳಿಂದ ಆರಂಭವಾಗಿ ನಗರದವರೆಗೆ ಅದರ ಸಡಗರ ಎದ್ದು ಕಾಣುತ್ತಿತ್ತು. ಇಡೀ ನಗರ ದಸರಾ ಸಂಭ್ರಮದಲ್ಲಿ ಮಿಂದೇಳುತ್ತಿತ್ತು. ಆದರೆ ಈಗ ದಸರಾ ಸಂಭ್ರಮಕ್ಕೆ ತುಕ್ಕು ಹಿಡಿದಿದೆ. ಸಂಭ್ರಮ ಮರೆಯಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾದ ಮೇಲೆ ಬಿದ್ದಿರುವ ಕೊರೊನಾ ಕರಿನೆರಳು ಲಕ್ಷಾಂತರ ಮಂದಿಯ ಅನ್ನವನ್ನು ಕಿತ್ತುಕೊಳ್ಳುವ ಮೂಲಕ ದಸರಾ ಸಂಭ್ರಮಕ್ಕೆ ತಣ್ಣೀರು ಎರಚಿರುವುದು ಎದ್ದು ಕಾಣುತ್ತಿದೆ. ಕಳೆದೊಂದು ವರ್ಷದ ಹಿಂದೆ ದಸರಾ ದಿನ ಹತ್ತಿರ ಬರುತ್ತಿದ್ದಂತೆಯೇ ಇಡೀ ಮೈಸೂರೇ ದಸರಾ ಸಡಗರದಲ್ಲಿ ತೇಲುತ್ತಿತ್ತು. ವ್ಯಾಪಾರ ವಹಿವಾಟುಗಳು ಸದ್ದಿಲ್ಲದೆ ಚೇತರಿಸಿಕೊಳ್ಳುತ್ತಿದ್ದವು. ಪ್ರವಾಸೋದ್ಯಮ ಗರಿಬಿಚ್ಚುತ್ತಿತ್ತು. ದಸರಾ ಸಮಯದಲ್ಲಿ ಜನ ತಮ್ಮ ಬದುಕನ್ನು ಬೇರೆ ಬೇರೆ ರೀತಿಯಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮೈಸೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ ಕೊರೊನಾ ಕಾಲಿಟ್ಟ ಗಳಿಗೆಯಿಂದಲೇ ಎಲ್ಲ ಸಂಭ್ರಮಕ್ಕೂ ತೆರೆಬಿದ್ದಿದೆ. ಜತೆಗೆ ಜನರ ಬದುಕು ಕೂಡ ಬೀದಿಗೆ ಬಂದಿದೆ. ಹೀಗಿರುವಾಗ ಸಂಭ್ರಮದ ಮಾತೆಲ್ಲಿ?
ಬಹಳಷ್ಟು ಮಂದಿ ದೂರದಿಂದ ಬರುವ ಪ್ರವಾಸಿಗರನ್ನು ನಂಬಿ ಬದುಕುತ್ತಿದ್ದಾರೆ. ಅದರಲ್ಲೂ ಇಲ್ಲಿ ಟಾಂಗಾ ಓಡಿಸಿ ಬದುಕುವ ಟಾಂಗಾ ವಾಲಗಳ ಬದುಕು ಮುರಾಬಟ್ಟೆಯಾಗಿದೆ. ಪ್ರವಾಸಿಗರು ಮೊದಲಿನಂತೆ ಬರುತ್ತಿಲ್ಲ. ಜತೆಗೆ ಟಾಂಗಾದಲ್ಲಿ ಸಂಚರಿಸುವ ಮನಸ್ಸು ಮಾಡುತ್ತಿಲ್ಲ. ಮೊದಲೆಲ್ಲ ದಸರಾ ಅಂದರೆ ನೂರಾರು ಕಾರ್ಯಕ್ರಮಗಳು ನಡೆಯುತ್ತಿದ್ದವು. ಹೀಗಾಗಿ ಎಲ್ಲ ಬಗೆಯ ವ್ಯಾಪಾರ ಮಾಡುವವರಿಗೆ ಅನುಕೂಲವಾಗುತ್ತಿತ್ತು. ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಆದರೆ ಈಗ ಯಾವುದೂ ಕಾಣುತ್ತಿಲ್ಲ. ಹೀಗಾಗಿ ಎಲ್ಲ ಮೊಗದಲ್ಲಿಯೂ ಸಡಗರ ಮರೆಯಾಗಿ ನೋವು ತುಂಬಿದೆ.
ಈ ಬಾರಿಯೂ ಸರಳ ದಸರಾ ಮಾಡುತ್ತಿರುವ ಕಾರಣ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿ, ಒಂದಷ್ಟು ಅತಿಥಿಗಳಷ್ಟೆ ಭವ್ಯ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದಾರೆ. ಉಳಿದಂತೆ ಸಂಪ್ರದಾಯಬದ್ಧವಾಗಿ ಆಚರಣೆಗಳು ನಡೆಯುತ್ತವೆಯಾದರೂ ಸಾರ್ವಜನಿಕರಿಗೆ ಎಲ್ಲಿಯೂ ಪ್ರವೇಶವಿರುವುದಿಲ್ಲ. ಜನ ಸೇರಿದರಷ್ಟೆ ದಸರಾ ಆದರೆ ಕೊರೊನಾ ಜನ ಸೇರಿದಷ್ಟು ಜಾಸ್ತಿ ಕಾಡುವುದರಿಂದ ಗುಂಪಾಗಿ ಸೇರುವಂತಿಲ್ಲ. ಆದಷ್ಟು ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯವಾಗಿದೆ. ಅರಮನೆಗಷ್ಟೆ ಜಂಬೂ ಸವಾರಿಯನ್ನು ಸೀಮಿತ ಮಾಡಿದೆ. ಗಣ್ಯರಿಗೆ ಅದರಲ್ಲೂ ಕೇವಲ 300 ಮಂದಿ ಮತ್ತು 50 ಕಾರ್ಯಕ್ರಮಗಳಿಗಷ್ಟೆ ಅವಕಾಶ ನೀಡಲಾಗಿದೆ. ಮೈಸೂರು ದಸರಾಕ್ಕೆ ಕಳೆ ಕಟ್ಟುವುದು ದೀಪಾಲಂಕಾರ. ಈ ದೀಪಾಲಂಕಾರ ಈ ಬಾರಿಯೂ ಇರಲಿದೆ. ಅರಮನೆ ಆವರಣದಲ್ಲಿ ಒಂಬತ್ತು ದಿನಗಳ ಕಾರ್ಯಕ್ರಮವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯಲಿದೆ.
ದಸರಾ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದಲ್ಲಿ ಅ.7ರಂದು ಬೆಳಿಗ್ಗೆ 8.15 ರಿಂದ 8.45ರೊಳಗೆ ಚಾಲನೆ ಸಿಗಲಿದೆ. ಅ.15ರಂದು ಮಧ್ಯಾಹ್ನ 2.45ರಿಂದ 3.15ರೊಳಗೆ ಜಂಬೂಸವಾರಿ ನಡೆಯಲಿದೆ. ಮುಂದಿನ ದಸರಾ ಕಾರ್ಯಕ್ರಮಗಳ ಕುರಿತಂತೆ ಸೆ.15ರ ಬಳಿಕ ಮತ್ತೊಂದು ಸಭೆ ನಡೆಯಲಿದ್ದು ಆಗಿನ ಪರಿಸ್ಥಿತಿಗಳನ್ನು ನೋಡಿಕೊಂಡು ಮುಂದಿನ ತೀರ್ಮಾನಗಳನ್ನು ಮಾಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿಯೂ ದಸರಾ ಸರಳ ಮತ್ತು ಸಾಂಪ್ರದಾಯಿಕವಾಗಿಯೇ ತೆರೆಕಾಣಲಿದೆ. ಒಟ್ಟಾರೆ ಕೊರೊನಾದಿಂದಾಗಿ ಎಲ್ಲರ ಬದುಕು ಸಂಕಷ್ಟಕ್ಕೊಳಗಾಗಿದೆ. ಜತೆಗೆ ಸಂಭ್ರಮಕ್ಕೂ ಕರಿಛಾಯೆ ಆವರಿಸಿದೆ.
ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಆಗಿದೆ. ಆದರೆ ಇಲ್ಲಿ ಒಂದು ವರ್ಷದಲ್ಲಿ ಒಂದೂ ಶೌಚಾಲಯ ಕಟ್ಟಲು ಅವರಿಗೆ…
ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದ ಸರ್ವೆ ನಂ. 108 ರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಸೇರಿದ 2 ಎಕರೆ…
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್ ಕೆಲಸದ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ…