ಬಂಟ್ವಾಳ : ಈಡಿ ಅಧಿಕಾರಿಗಳು ಎಂದು ನಂಬಿಸಿ ನಕಲಿ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ಲೂಟಿ ಮಾಡಿದ ಘಟನೆ ವಿಟ್ಲದ ಬೋಳಂತೂರು ಎಂಬಲ್ಲಿ ನಡೆದಿದೆ.
ಸಿಂಗಾರಿ ಬೀಡಿ ಸಂಸ್ಥೆಯ ಮಾಲಕ ಬೋಳಂತೂರು ಸಮೀಪದ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಮನೆಯಲ್ಲಿ ಕೃತ್ಯ ನಡೆದಿದ್ದು, ಘಟನೆ ಕುರಿತಾಗಿ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲ್ಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡ ಬಂದು ದಿಢೀರ್ ದಾಳಿ ನಡೆಸಿ ಈಡಿ ಅಧಿಕಾರಿಗಳು ಎಂದು ನಂಬಿಸಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಶುಕ್ರವಾರ ತಡರಾತ್ರಿ 7 ಜನರ ತಂಡ ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದು ಸುಲೈಮಾನವರ ಮನೆಯ ಕದ ತಟ್ಟಿದ್ದಾರೆ. ತಮ್ಮನ್ನು ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಈ ಖದೀಮರು, ತಮ್ಮ ಆಸ್ತಿ ಹಾಗೂ ಬ್ಯಾಂಕ್ ವಹಿವಾಟಿನ ಲೆಕ್ಕ ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಇದಲ್ಲದೇ ತನಿಖೆಗೆ ಸಹಕರಿಸದಿದ್ದರೇ, ಬಂಧಿಸುವುದಾಗಿ ಹೆದರಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಈ ತಂಡ ತನಿಖೆಯ ನಾಟಕವಾಡಿದೆ. ಮುಂಜಾನೆ ಸಮಯ ಅವರು ಮನೆಯಿಂದ ಸುಮಾರು 30 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಕಾರಿನಲ್ಲಿ ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ.
ಇವರು ಹಿಂದಿ ಇಂಗ್ಲೀಷ್ ಹಾಗೂ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದುಷ್ಕರ್ಮಿಗಳು ಬಂದ ಕಾರು ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿತ್ತು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಬಹಿರಂಗವಾಗುತ್ತಲೇ ವಿಟ್ಲ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು. ಆರೋಪಿಗಳ ಪತ್ತೆಗೆ ಅಲರ್ಟ್ ಆಗಿದ್ದಾರೆ. ಪರಿಸರದ ಎಲ್ಲ ರಸ್ತೆಗಳಲ್ಲಿ ನಾಕಬಂಧಿ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.