ಮಂಗಳೂರು: ಓರ್ವ ಶಿಕ್ಷಕರಾಗಿ, ಕಲಾರಾಧಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಬಹುಮುಖ ವ್ಯಕ್ತಿತ್ವದ ಶ್ರೀ ಬೈಕಾಡಿ ಜನಾರ್ದನ ಆಚಾರ್ ಇವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಪ್ರಬುದ್ಧ ಶಿಕ್ಷಕರಾಗಿದ್ದ ಶ್ರೀಯುತರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿ, ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ಮತ್ತು ಬೆಂಬಲ ನೀಡುತ್ತಿದ್ದರು.
ಶ್ರೀಯುತರ ಧ್ಯೇಯೋದ್ದೇಶಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ‘ಬೈಕಾಡಿ ಪ್ರತಿಷ್ಠಾನ’ ಪ್ರಾರಂಭಗೊಂಡಿತು. ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಿದ ‘ಬೈಕಾಡಿ ಪ್ರತಿಷ್ಠಾನ’ ಪ್ರತೀ ವರ್ಷ ಬೈಕಾಡಿಯವರ ಹುಟ್ಟುಹಬ್ಬದಂದು ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ನೀಡುತ್ತಾ ಬಂದಿದೆ. 5ನೇ ವರ್ಷದ ಈ ಪ್ರಶಸ್ತಿಯನ್ನು ಸಾಹಿತಿ, ಸಮಾಜ ಸೇವಕಿ ಹಾಗೂ ವಿಶ್ರಾಂತ ಅಧ್ಯಾಪಕಿ ‘ಶ್ರೀಮತಿ ಕೆ. ಎ. ರೋಹಿಣಿ’ ಇವರು ಸ್ವೀಕರಿಸಲಿದ್ದಾರೆ.
ಜನವರಿ 5, 2025 ಆದಿತ್ಯವಾರ, ಸಂಜೆ 5ಕ್ಕೆ, ‘ತುಳು ಭವನ’ದ ಪ್ರೊ. ಅಮೃತ ಸೋಮೇಶ್ವರ ಸಭಾಂಗಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉರ್ವಸ್ಟೋರ್, ಮಂಗಳೂರು ಇಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು, ಉತ್ತರಾಧಿಕಾರಿಗಳು, ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿ ಇವರ ದಿವ್ಯ ಸಾನಿಧ್ಯದೊಂದಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸೈನಿಕರು ಹಾಗೂ ಮಾಜಿ ಶಾಸಕರು, ಕರ್ನಾಟಕ ವಿಧಾನ ಪರಿಷತ್,
ಡಾ. ಎಸ್. ಆರ್. ಹರೀಶ್ ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಸಹಕಾರ ಬ್ಯಾಂಕ್ ನಿ., ಮಂಗಳೂರು, ಶ್ರೀ ಗುಂಡುರಾಜು, ಶ್ರೀ ರಾಜಾರಾಮ ತೊಗಲು ಬೊಂಬೆ ಮೇಳ, ಹಾಸನ, ಡಾ. ಶ್ವೇತಾ ಮಡಪ್ಪಾಡಿ, ಸಂಸ್ಥಾಪಕರು, ಧ್ವನಿ ಫೌಂಡೇಶನ್, ಮೈಸೂರು ಇವರ ಉಪಸ್ಥಿತಿಯಲ್ಲಿ ಜರಗಲಿದೆ. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಶ್ರೀ ಗುಂಡುರಾಜು ಹಾಗೂ ತಂಡ, ಹಾಸನ ಇವರಿಂದ ವಿಶೇಷ ಕಾರ್ಯಕ್ರಮ ‘ತೊಗಲು ಬೊಂಬೆಯಾಟ’ ನಡೆಯಲಿದೆ. ಕಲಾಸಕ್ತರಿಗೆ ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಬಯಸುತ್ತೇವೆ.