ಮಂಡ್ಯ : ಬೆಳಗಾವಿಯ ಸುವರ್ಣಸೌಧದಲ್ಲಿ ಬಸವಣ್ಣನವರ ಅನುಭವ ಮಂಟಪದ ದೈತ್ಯ ತೈಲಚಿತ್ರ ಅನಾವರಣಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್ ಶ್ಲಾಘಿಸಿದ್ದಾರೆ.
ಬಸವಾನುಯಾಯಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಮಂಡಲದ ಅಧ್ಯಕ್ಷರಾದ ಯು.ಟಿ.ಖಾದರ್, ಬಸವರಾಜ್ ಹೊರಟ್ಟಿಯವರ ಬಸವಪ್ರಜ್ಞೆ ಇತರೆ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದ್ದಾರೆ. ಬಸವಣ್ಣನವರ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎಂದೇ ಪರಿಗಣಿಸಲಾಗಿದೆ.
ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಸರ್ಕಾರ ಕನ್ನಡರಾಜ್ಯೋತ್ಸವದ ಸಂದರ್ಭಧಲ್ಲಿ ಬಸವಣ್ಣನವರ ಭಾವಚಿತ್ರವನ್ನು ಧ್ವಜಾರೋಹಣದ ಸಂದರ್ಭದಲ್ಲಿಟ್ಟು ಗೌರವಿಸುವ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
ವಿಶ್ವಗುರು ಶ್ರೀ ಬಸವಣ್ಣನವರು ಸ್ಥಾಪಿಸಿದ, ವಿಶ್ವದ ಮೊದಲ ಸಂಸತ್ತು” ಎಂಬ ಖ್ಯಾತಿಯ, “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳು, ಸಮಾನತೆ, ಮಾನವೀಯ ಸಂದೇಶಗಳನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಲಿದೆ ಎಂದು ಎಂ.ಎಸ್.ಮಂಜುನಾಥ್ ತಿಳಿಸಿದ್ದಾರೆ.
ಅನುಭವಮಂಟಪ ಸಮಾನತೆಯ ಸಂಕೇತವಾಗಿದ್ದು ಪ್ರಜಾಪ್ರಭುತ್ವದ ಆಶಯಗಳನ್ನು ಬಿಂಬಿಸುವ ಸುವರ್ಣಸೌಧದ ತೈಲಚಿತ್ರ ಮಾದರಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಯತ್ ಕಚೇರಿಯ ಸಭಾಂಗಣದಲ್ಲಿ ಅಳವಡಿಸಲು ಸರ್ಕಾರ ಆದೇಶ ಹೊರಡಿಸಬೇಕೆಂದು ಲಿಂಗಾಯತ ಮಹಾಸಭಾ ಕೋರಿದೆ.