ತೀರ್ಥಹಳ್ಳಿ: ದೋಣಿ ಮಗುಚಿ ವಾಯು ವಿಹಾರಕ್ಕೆ ತೆರಳಿದ್ದ ನಾಲ್ಕು ಮಂದಿ ಯುವಕರು ಮೃತಪಟ್ಟಿದ್ದು, ಮೂವರು ಅಪಾಯದಿಂದ ಪಾರಾಗಿರುವ ಘಟನೆ ಆದಿತ್ಯವಾರ ಸಂಜೆ ಹೂಡೆಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ.
ನೀರು ಪಾಲಾದವರನ್ನು ಹೂಡೆಯ ಫೈಝಾನ್ ಹಾಗೂ ಇಬಾದ್ ಮತ್ತು ಇವರ ಸಂಬಂಧಿ ತೀರ್ಥಹಳ್ಳಿಯ ಯುವಕರು ಎಂದು ಗುರುತಿಸಲಾಗಿದೆ.
ರಂಝಾನ್ ರಜೆಯ ಹಿನ್ನೆಲೆಯಲ್ಲಿ ತೀರ್ಥಳ್ಳಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅಲ್ಲಿಂದ ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿ ಕೊಂಡು ಕುದ್ರುವಿಗೆ ಸೇರಿಕೊಂಡರು. ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹುಡುಕಾಟ ನಡೆಸಿದಾಗ ಮೂರು ಮಂದಿಯ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಸ್ಥಳೀಯರು ಹಾಗೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಸಿದ್ದಾರೆ.