ಶಿವಮೊಗ್ಗ: ಭಗವಂತನ ಉಪದೇಶದಂತೆ ನಾವು ಸಮಾಜಕ್ಕೆ ಉಪಕಾರವಾಗುವ ಕೆಲಸ ಮಾಡಬೇಕು ಎಂದು ಕಾಶೀ ಮಹಾಪೀಠದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಂಗಮ ಮಹಿಳಾ ಸಮಾಜದಿಂದ ವಿನೋಬನಗರ ಶಿವಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಸ್ತ ಮನುಷ್ಯ ಕುಲದ ಏಳಿಗೆಗೆ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಈಶ್ವರಪ್ಪ , ಶಿವಾಲಯ ಪಕ್ಕದಲ್ಲಿರುವ ಖಾಲಿ ನಿವೇಶನವನ್ನು ಶಿವಾಲಯ ಸಮಿತಿಗೆ ನೀಡುವ ಬಗ್ಗೆ ನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಜಂಗಮ ಮಹಿಳಾ ಸಮಾಜಕ್ಕೆ ಸೂಡಾದಿಂದ ನಿವೇಶನ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಸಾಧನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡಾ ವಿಶೇಷ ಯೋಜನೆಗಳನ್ನು ಬಜೆಟ್ನಲ್ಲಿ ರೂಪಿಸಿದೆ. ಶಿವಮೊಗ್ಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಲು ಅನೇಕ ಅವಕಾಶಗಳಿವೆ ಎಂದು ಹೇಳಿದರು.
ಜಗದ್ಗುರುಗಳಿಗೂ ಜನ್ಮ ನೀಡುವವರು ಜಂಗಮ ಸಮಾಜದ ಮಹಿಳೆಯರು. ಎಲ್ಲರಿಗೂ ಮುಕ್ತಿ ನೀಡುವ ಸಮಾಜವೆಂದರೆ ಅದು ಜಂಗಮ ಸಮಾಜ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಲಿಂಗಧಾರಿಗಳ ಆಚಾರ, ವಿಚಾರದಲ್ಲಿ ಅಪಚಾರವಾದರೆ ಅವರಿಗೆ ಅಪಾಯ ತಪ್ಪಿದ್ದಲ್ಲ. ಹುಟ್ಟಿನಿಂದಲ್ಲ ಆಚರಣೆಯಿಂದ ನಾವು ವೀರಶೈವರಾಗಬೇಕು. ಇತ್ತೀಚೆಗೆ ನಮ್ಮ ಆಚಾರದಲ್ಲಿ ಬದಲಾವಣೆಗಳಾಗುತ್ತಿವೆ. ಶಿವಪೂಜೆ ಕೇವಲ ಯಾಂತ್ರಿಕವಾಗುತ್ತಿದೆ. ನಿತ್ಯ ನಮ್ಮ ಶಕ್ತಿ ಸಾಮರ್ಥ್ಯ ಕಳೆದುಕೊಳ್ಳದಂತೆ ಜಂಗಮರು ಮಾರ್ಗದರ್ಶನ ನೀಡಬೇಕಿದೆ ಎಂದರು.
ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಂಗಮ ಮಹಿಳಾ ಸಮಾಜದ ಅಧ್ಯಕ್ಷೆ ಸುಜಯಾ ಪ್ರಸಾದ್, ಕಾರ್ಯದರ್ಶಿ ಶೈಲಜಾ ಜಯದೇವಯ್ಯ, ಗೌರವ ಅಧ್ಯಕ್ಷೆ ಪಾರ್ವತಮ್ಮ , ಸಹ ಕಾರ್ಯದರ್ಶಿ ರೇಖಾ, ನಗರ ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೇಕೆರೆ, ವೀರಶೈವ ಕಲ್ಯಾಣ ಮಂದಿರದ ಕಾರ್ಯದರ್ಶಿ ಎನ್.ಜೆ.ರಾಜಶೇಖರ್, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಕಾರ್ಯದರ್ಶಿ ಎಸ್.ಪಿ.ದಿನೇಶ್, ಬೇಡ ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪುರೋಹಿತ ಸಮಾಜದ ಮಹಾಲಿಂಗ ಶಾಸ್ತ್ರಿ, ನಾಗರಾಜ ಶಾಸ್ತ್ರಿ, ರುದ್ರಯ್ಯ ಉಪಸ್ಥಿತರಿದ್ದರು.