ಶಿವಮೊಗ್ಗ: ಶಿವಮೊಗ್ಗದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ.
ಪ್ರಧಾನಿ ಮೋದಿ ಅವರನ್ನು ವಿಮಾನದಲ್ಲಿ ಕರೆತಂದು ನಿಲ್ದಾಣ ಲೋಕಾರ್ಪಣೆ ಮಾಡಿಸುವ ಆಲೋಚನೆ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊಗಳಿಕೆ ಕಡಿಮೆ ಆಗಬೇಕು..!
ಸಮಾರಂಭದಲ್ಲಿ ಮಾತನಾಡಲು ಯಡಿಯೂರಪ್ಪ ಅವರನ್ನು ಆಹ್ವಾನಿಸುವ ವೇಳೆ ನಿರೂಪಕ ಸಮನ್ವಯ ಕಾಶಿ ಯಡಿಯೂರಪ್ಪ ಅವರನ್ನು ಬಾಯ್ತುಂಬಾ ಹೊಗಳ ತೊಡಗಿದರು.
ಕರ್ನಾಟಕದ ರಾಜಾ ಹುಲಿ ಎಂದು ಬಣ್ಣಿಸಿದರು. ಅದರ ಮಧ್ಯೆಯೇ ಧ್ವನಿವರ್ಧಕದ ಬಳಿ ಬಂದ ಯಡಿಯೂರಪ್ಪ ಅವರು, ಹೊಗಳಿಕೆ ಮಾತು ಕಡಿಮೆ ಆಗಬೇಕು. ಜನರ ಅಭಿವೃದ್ಧಿಗಾಗಿ ಎಲ್ಲರೂ ಅಪೇಕ್ಷೆ ಪಟ್ಟು ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದರು.