News Karnataka Kannada
Sunday, April 28 2024
ಶಿವಮೊಗ್ಗ

ಶಿವಮೊಗ್ಗ: ಭಾರತ ಬಂದ್ ಗೆ ಅನೇಕ ಸಂಘಟನೆಗಳ ನೈತಿಕ ಬೆಂಬಲ

New Project (12)
Photo Credit :

ಶಿವಮೊಗ್ಗ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ರೈತ ಸಂಯುಕ್ತ ಕಿಸಾನ್ ಮೋರ್ಚಾ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದು, ಶಿವಮೊಗ್ಗದಲ್ಲೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ನಡೆಸಿತು.

ಅನೇಕ ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದು, ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಿವಮೊಗ್ಗದಲ್ಲಿ ಜನಜೀವನ ಸಹಜವಾಗಿತ್ತು. ಖಾಸಗಿ, ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇದ್ದುದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿಲ್ಲ. ಬಸ್, ಆಟೋ, ರೈಲು, ವಾಹನ ಸಂಚಾರ ಎಂದಿನಂತೆ ಇತ್ತು. ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಲಿಲ್ಲ. ಆದರೆ, ಎಪಿಎಂಸಿ ತರಕಾರಿ ಮಾರುಕಟ್ಟೆ ಮಾತ್ರ ಬೆಳಗ್ಗೆಯೇ ಸಂಪೂರ್ಣ ಬಂದ್ ಆಗಿತ್ತು. ವ್ಯಾಪಾರ ವಹಿವಾಟು ನಡೆಯಲಿಲ್ಲ. ಮಾರುಕಟ್ಟೆ ಹೊರಗೆ ರಸ್ತೆ ಬದಿಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ನಡೆಸಿದರು. ಸಗಟು ವ್ಯಾಪಾರ ಬಂದ್ ಆಗಿತ್ತು. ರೈತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಶಾಲಾ, ಕಾಲೇಜುಗಳು, ಕಚೇರಿ, ಬ್ಯಾಂಕ್ ಗಳು ಎಂದಿನಂತೆ ನಡೆದವು.

ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಹಲವು ಕನ್ನಡಪರ ಸಂಘಟನೆಗಳ ಪ್ರಮುಖರು ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ನಡೆಸಿದರು. ಪೊಲೀಸ್ ಬಂದೋಬಸ್ತ್ ಇದ್ದ ಕಾರಣ ಖಾಸಗಿ ಬಸ್ ಸಂಚಾರ ತಡೆಯುವ ಯತ್ನ ಫಲಿಸಲಿಲ್ಲ.

ಬೃಹತ್ ಪ್ರತಿಭಟನೆ:

ನಗರದ ವಿವಿಧೆಡೆಯಿಂದ ಬಂದ ಸಂಘಟನೆಗಳ ಪ್ರಮುಖರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಒಟ್ಟಾಗಿ ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ಗಾಂಧಿ ಬಜಾರ್ ನಿಂದ ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ ಮೂಲಕ ಮಹಾವೀರ ವೃತ್ತಕ್ಕೆ ತಲುಪಿ ಅಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.

ರೈತ ನಾಯಕರಾದ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಬಂದ್ ಯಶಸ್ವಿಯಾಗಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು, ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಪೂರ್ಣ ಬಂದ್ ಆಗದಿದ್ದರೂ ಸಹ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈತರ ಭೂಮಿಯನ್ನು ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ರೈತರು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೊರಹೊಮ್ಮಲಿದೆ ಎಂದರು.

ದೆಹಲಿಯಲ್ಲಿ 10 ತಿಂಗಳಿಂದ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರು, ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ಮಾಡದೇ ಏಕಪಕ್ಷೀಯ ಧೋರಣೆ ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ರೈತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರೈತ ನಾಯಕ ಕೆ.ಟಿ. ಗಂಗಾಧರ್ ಮಾತನಾಡಿ, ಜನಸಾಮಾನ್ಯರ ಊಟದ ತಟ್ಟೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ರೈತರು ಮತ್ತು ದೇಶದ ಜನ ಸಾಮಾನ್ಯ ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಗುಲಾಮರಾಗುತ್ತಾರೆ. ವಂಶ ಪಾರಂಪರ್ಯದಿಂದ ಉಳಿಸಿಕೊಂಡ ಭೂಮಿಯನ್ನು ಮುಂದಿನ ಪೀಳಿಗೆ ಕಳೆದುಕೊಳ್ಳಲಿದೆ. ಆಹಾರಕ್ಕಾಗಿ ಸಂಕಟಪಡುವ ದಿನ ದೂರವಿಲ್ಲ ಎಂದರು.

ಕೂಡಲೇ ಕೇಂದ್ರ ಮತ್ತು ರಾಜ್ಯ ರೈತರನ್ನು ಕರೆದು ಅವರ ವಿಶ್ವಾಸ ಪಡೆದು ಮಾತುಕತೆ ನಡೆಸಿ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ವಾಪಸ್ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕಿಸಾನ್ ಮೋರ್ಚಾ ಪ್ರಮುಖರಾದ ಹಾಗೂ ಸಂಚಾಲಕರಾ ಎಂ. ಶ್ರೀಕಾಂತ್, ಎನ್. ರಮೇಶ್, ಕೆ.ಎಲ್. ಅಶೋಕ್, ಕೆ.ಪಿ. ಶ್ರೀಪಾಲ್, ಯಮುನಾ ರಂಗೇಗೌಡ, ಸಿಐಟಿಯು ಪ್ರಮುಖರಾದ ಹನುಮಕ್ಕ, ಮಧುಸೂದನ್, ನಾಗರಾಜ್ ಕಂಕಾರಿ, ಶಾಂತಾ ಸುರೇಂದ್ರ, ಹೆಚ್.ಪಿ. ಗಿರೀಶ್, ರವಿಕುಮಾರ್, ಪಾಲಾಕ್ಷಿ, ಹಾಲೇಶಪ್ಪ ಮೊದಲಾದವರಿದ್ದರು.

ಯಾವುದೇ ಕಾರಣಕ್ಕೂ ಜೀವನಾವಶ್ಯಕ ವಸ್ತುಗಳ ಮಾರಾಟ ಮತ್ತು ಉತ್ಪನ್ನ ಕಾಯ್ದೆಗೆ ತಿದ್ದುಪಡಿ ಮಾಡಬಾರದು. ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದುಗೊಳಿಸಬೇಕು, ವಿದ್ಯುತ್ ಖಾಸಗೀಕರಣಕ್ಕೆ ಕೈಹಾಕಬಾರದು. ಕನಿಷ್ಠ ಬೆಂಬಲ ಬೆಲೆಯನ್ನು ಎಂ.ಎಸ್.ಪಿ. ಕಾನೂನಿನ ಚೌಕಟ್ಟಿನಲ್ಲಿ ತರಬೇಕು. ಭೂಸುಧಾರಣಾ ಕಾಯ್ದೆಗೆ ರಾಜ್ಯಮಟ್ಟದಲ್ಲಿ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ, ಮೇಕೆದಾಟಿನ ಅಣೆಕಟ್ಟಿನ ಕೆಲಸವನ್ನು ಇನ್ನೂ ಆರಂಭಿಸದೇ ಇರುವುದರ ವಿರುದ್ಧ, ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು