ಶಿವಮೊಗ್ಗ: ಅಡುಗೆ ಮಾಡುವ ವೇಳೆ ಹಾವು ಕಚ್ಚಿ ಗೃಹಿಣಿಯೊಬ್ಬರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮದಲ್ಲಿ ಮೃತಪಟ್ಟಿದ್ದಾರೆ.
ಹಾವು ಕಚ್ಚಿರಬಹುದೆಂದು ಮನೆಯವರು ಹೊಸನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸೌಮ್ಯ ಸಾವನ್ನಪ್ಪಿದ್ದಾರೆ. ಪತಿ, 3 ವರ್ಷದ ಪುತ್ರನನ್ನ ಬಿಟ್ಟು ಅಗಲಿದ್ದಾರೆ.
ನಾಗರಾಜ್ ಅವರ ಪತ್ನಿ ಸೌಮ್ಯ(24) ಮೃತಪಟ್ಟವರು ಎಂದು ಹೇಳಲಾಗಿದೆ. ಬುಧವಾರ ಮಧ್ಯಾಹ್ನ ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕಾಲಿಗೆ ಹಾವು ಕಚ್ಚಿದೆ.
ಆದರೆ ಅವರಿಗೆ ಗೊತ್ತಾಗಿಲ್ಲ. ಸ್ವಲ್ಪ ಸಮಯದ ನಂತರ ಬಾಧೆ ಜಾಸ್ತಿಯಾಗಿದ್ದು, ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಸೌಮ್ಯ, ನಾಗರಾಜ್ ಪ್ರೀತಿಸಿ ಮದುವೆಯಾಗಿದ್ದರು. ಮನೆ ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಪಕ್ಕದಲ್ಲಿ ತಾತ್ಕಾಲಿಕವಾಗಿ ವಾಸವಿದ್ದರು. ಅಡುಗೆ ಮಾಡುವಾಗ ಹಾವು ಕಚ್ಚಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.