ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿ ಸೇರಿದಂತೆ ಗ್ರಾಮಾಂತರ ಪ್ರದೇಶದ ವಿವಿಧ ಕಡೆಗಳಲ್ಲಿನ 7 ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಭಾನುವಾರ 7 ಜನ ಆರೋಪಿಗಳನ್ನು ವಶಪಡಿಸಿಕೊಂಡು, ಕದ್ದ ಮಾಲನ್ನು ಮತ್ತು ಕಳ್ಳತನಕ್ಕೆ ಬಳಸಲಾಗಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಡಿಕೆ ಕಳ್ಳತನ ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಟಾಕಾರಿ ಲಕ್ಷ್ಮಿ ಪ್ರಸಾದ್ ಹಾಗೂ ಎಎಸ್ಪಿ ಡಾ. ವಿಕ್ರಂ ಅಮಾತೆ ಮಾರ್ಗದರ್ಶನದಲ್ಲಿ ಎಸ್ಎಸ್ಪಿ ರೋಹನ್ ಜಗದೀಶ್ ಮೇಲುಸ್ತುವಾರಿಯಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಮತ್ತು ಅಪರಾಧ ವಿಭಾಗದ ಸುಜಾತ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ಪ್ರೊಬೆಷನರಿ ಅಧಿಕಾರಿ ರಘುವೀರ್, ಸಿಬ್ಬಂದಿ ತಾರಾನಾಥ, ರಘು ಶೆಟ್ಟಿ, ಅಶೋಕ್, ರವಿಕುಮಾರ್, ಈರಯ್ಯ ಮಠಪತಿ, ವಿನಾಯಕ, ಮಾಲತೇಶ್, ನರೇಂದ್ರ ಮತ್ತಿತರು ಕಾರ್ಯಾಚರಣೆ ನಡೆಸಿದ್ದರು.
ಬಂಧಿತ ಆರೋಪಿಗಳಿಂದ 8.35 ಲಕ್ಷ ರೂ. ಮೌಲ್ಯದ ಸಿಪ್ಪೆಗೋಟು, ಚಾಲಿ ಹಾಗೂ ಕೆಂಪು ಅಡಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಓಮ್ನಿ, 2 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.