ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ದಾಂಧಲೆ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಬೀಟಮ್ಮ ಗ್ಯಾಂಗ್ ಇದೀಗ ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿದೆ.
ಕಳೆದ ನಾಲ್ಕು ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಐದು ಗ್ರಾಮಗಳಿಗೆ ಈ ಗ್ಯಾಂಗ್ ಲಗ್ಗೆ ಇಟ್ಟಿದ್ದು, ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ ಬೆಳೆ ನಾಶಗೊಂಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಾಸನ ಚಿಕ್ಕಮಗಳೂರು ಗಡಿ ಭಾಗದಲ್ಲಿ ಬೀಡುಬಿಟ್ಟಿರುವ ಬೀಟಮ್ಮ ತನ್ನ 20ಕ್ಕೂ ಹೆಚ್ಚು ಕಾಡಾನೆಗಳೊಂದಿಗೆ ದಾಂಧಲೆ ನಡೆಸುತ್ತಿದ್ದಾಳೆ.
ಕಾರ್ ಬೈಲು, ನಂದಿಪುರ, ಮಾಕೋನಹಳ್ಳಿ, ಚಂದ್ರಾಪುರದಲ್ಲಿ ಸಂಚಾರ ಮಾಡುತ್ತಿರುವ ಬೀಟಮ್ಮ ಗ್ಯಾಂಗ್, ಮಾಕೋನಹಳ್ಳಿ ಹಾಗೂ ಕಾರ್ ಬೈಲು ಗ್ರಾಮಗಳಲ್ಲಿ 10 ಎಕರೆಗೂ ಅಧಿಕ ಪ್ರದೇಶದಲ್ಲಿ ಕಾಫಿ ತೋಟ ನಾಶಗೊಳಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆ ಹಿಂಡನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.
ನಾನು ನಡೆದಿದ್ದೇ ದಾರಿ ಎಂದು ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಲಗ್ಗೆ ಇಡುತ್ತಿದೆ. ಈ ಗ್ಯಾಂಗ್ ನಗರ ಪ್ರದೇಶಕ್ಕೆ ಎಂಟ್ರಿ ಕೊಡದಂತೆ ನೋಡಿಕೊಳ್ಳಲು ಇಟಿಎಫ್ ಸಿಬ್ಬಂದಿ ಕಾವಲು ನಿಂತಿದ್ದರು. ಆದರೆ, ಈ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ಸಂಬಳವಿಲ್ಲ, ಕಾರ್ಯಚರಣೆ ವೇಳೆ ಊಟ-ತಿಂಡಿಯೂ ನಿಡುತ್ತಿಲ್ಲವೆಂದು ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿ ಅರಣ್ಯ ಇಲಾಖೆ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು. ಅಲ್ಲದೆ, ಕೆಲಸಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಅನಾವಶ್ಯಕವಾಗಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕೆಲಸವಿದ್ದರೆ ಬೆಳಗ್ಗೆ ಮಾಡಿಕೊಳ್ಳಿ ಎಂಬ ಮಾತುಗಳನ್ನು ಮೈಕ್ ಮೂಲಕ ಅನೌನ್ಸ್ ಮಾಡಿಸಿದ್ದಾರೆ. ಕಾಫಿ ತೋಟ ಹಾಗೂ ಇತರೆ ಕೆಲಸಗಳಿಗೆ ಅನಾವಶ್ಯಕವಾಗಿ ಹೋಗಬೇಡಿ ಎಂದು ಹೇಳಿದ್ದಾರೆ.