ಶೃಂಗೇರಿ: ಮೋದಿ ಸುಳ್ಳಿನ ಸರದಾರ. ಬಿಜೆಪಿಯವರಿಗೆ ಸುಳ್ಳು ಮನೆದೇವರು. ಸುಳ್ಳು ಆಶ್ವಾಸನೆಗಳು, ಆಡಳಿತ ವೈಫಲ್ಯ, ಲಂಚ, ೪೦ ಪರ್ಸೆಂಟ್ ಕಮಿಷನ್, ರಾಜ್ಯ- ಕೇಂದ್ರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸುಳ್ಳಿಗಿರುವ ಮೊತ್ತೊಂದು ಹೆಸರೇ ಬಿಜೆಪಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಪಟ್ಟಣದ ಸಂತೇಮಾರುಕಟ್ಟೆ ಎದುರು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕರಾವಳಿ ಮಲೆನಾಡು ಭಾಗದ ಪ್ರಜಾಧ್ವನಿ ಯಾತ್ರೆ ಸಭೆಯಲ್ಲಿ ಮಾತನಾಡಿದರು. ಮಹದಾಯಿ ಯೋಜನೆ ಬಗ್ಗೆ ಸುಳ್ಳು ಭರವಸೆ ನೀಡಿದರು. ೪ ಇಂಜಿನ್ ಸರ್ಕಾರಗಳು ಸೇರಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಆಪ್ರಿಕಾದಿಂದ ಸಣ್ಣ ಚಿರತೆಯೊಂದನ್ನು ತಂದುಬಿಟ್ಟು ದೊಡ್ಡ ಸುದ್ದಿ ಮಾಡಿಕೊಂಡರು. ರೈತರ ಸಮಸ್ಯೆ, ಜನರ ಸಮಸ್ಯೆ ಇವರಿಗೆ ಕಾಣಲಿಲ್ಲ.
೨೦೧೮ರಲ್ಲಿ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ೧೭ ಜನ ಶಾಸಕರನ್ನು ಬಾಂಬೆಯಲ್ಲಿ ರಹಸ್ಯವಾಗಿಟ್ಟು ಕುದುರೆ ವ್ಯಾಪಾರ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರು. ಯಡಿಯೂರಪ್ಪ ನವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಯಾಕೆ ಅಂತ ಇವತ್ತಿಗೂ ಹೇಳಿಲ್ಲ. ಯಡಿಯೂರಪ್ಪ ಅವರ ಮಕ್ಕಳ ಭ್ರಷ್ಠಾಚಾರದಿಂದ ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಜನರ ಭಾವನೆ ಗಳನ್ನು ಕೆರಳಿಸಿ ಧರ್ಮ ಆಧಾರಿತ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿಯವರು ದೇಶದ ಆಸ್ತಿಯನ್ನೆಲ್ಲ ತನ್ನ ಖಾಸಗಿ ಮಿತ್ರರಿಗೆ ಮಾರುತ್ತಿ ದ್ದಾರೆ. ಎಚ್ಎಂಟಿ, ಎಚ್ಎಎಲ್, ರೈಲ್ವೆ ಸೇರಿದಂತೆ ಸಾರ್ವ ಜನಿಕ ಉದ್ಯಮ ಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಿದ್ದಾರೆ. ನಾ ಖಾವೂಂಗಾ, ನಾ ಖಾನೆ ದೂಂಗಾ ಅಂದರು. ಈಗ ಬಿಜೆಪಿಯವರು ೪೦ ಪರ್ಸೆಂಟ್ ಕಮಿಷನ್ ರಾಜಕಾರಣ ಮಾಡುತ್ತಿ ದ್ದರೂ ಮೋದಿಯವರು ಮೌನಿ ಬಾಬಾ ವಾಗಿದ್ದಾರೆ ಎಂದು ಲೇವಡಿ ಮಾಡಿದರು.
ರೈತರು ಒಂದು ವರ್ಷಗಳ ಕಾಲ ಅನಿರ್ದಿಷ್ಠಾವಧಿ ದರಣಿ ನಡೆಸಿದ್ದರೂ ಅವರ ಸಮಸ್ಯೆಗೆ ಸ್ಪಂದಿಸಲಿಲ್ಲ. ರೈತರನ್ನು ನಿರ್ಲಕ್ಷ ಮಾಡಿ ಅದಾನಿ, ಅಂಬಾನಿಗಳನ್ನು ಬೆಳೆಸಿದರು. ಇವರಿಗೆ ಜನರ ಸಮಸ್ಯೆಗಳು ಮುಖ್ಯವಲ್ಲ. ಲವ್ ಜಿಹಾದ್ ಚುನಾವಣೆ ಘೋಷಣೆಯಾಗಿದೆ. ವಿಜಯ ಸಂಕಲ್ಪಯಾತ್ರೆ ನಡೆಸುತ್ತಿದ್ದಾರೆ. ಯಾವುದರಲ್ಲಿ ವಿಜಯಗಳಿಸಿದ್ದಾರೆ. ಜನ ವಿರೋಧಿ ಶಾಸನ, ಕಾಯ್ದೆಗಳನ್ನು ಜಾರಿ ಗೊಳಿಸಿ ರೈತರ ಪಾಲಿಗೆ ಮರಣ ಶಾಸನ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಚುನಾವ ಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಭಾರಿ ಪಕ್ಷದ ಚುನಾವಣಾ ಪ್ರಣಾಳಿಕೆ ಸೇರಿಸಿ ಪ್ರಜಾಧ್ವನಿ ಯಾತ್ರೆ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ,ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಬೆಲೆಯೇರಿಕೆ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಜಿಎಸ್ಟಿ, ಬೆಲೆಯೇರಿಕೆ ಜನಸಾಮಾನ್ಯರ ಬದುಕನ್ನೆ ಕಸಿದುಕೊಂಡಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕೆಸಿಸಿಸಿ ಸದಸ್ಯ ಸದಾಶಿವ, ಅಬ್ದುಲ್ ಗಫ್ಮರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್, ನಟರಾಜ್, ಶಕಿಲಾ, ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ ಮತ್ತಿತರರು ಇದ್ದರು.