ಚಿಕ್ಕಮಗಳೂರು: ಮಾಜಿ ವಿಧಾನಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ್ರು ಮಕ್ಕಳು ಹುಲಿ ನೋಡಿ ಬೆದರಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ವಾಸ್ತವವಾಗಿ ಅದು ಮೇಕ್ ಇನ್ ಇಂಡಿಯಾದ ಲಾಂಚನ ಸಿಂಹ ಅದು. ಹುಲಿಗು ಸಿಂಹಕ್ಕೂ ವ್ಯತ್ಯಾಸವಿದೆ. ಆ ಪ್ರತಿಮೆ ನಿಲ್ಲಿಸಿರುವುದು ದೇಶದಲ್ಲಿ ಮೇಕ್ ಇನ್ ಇಂಡಿಯಾದ ಅರಿವು ಮೂಡಿಸಲು. ಮಕ್ಕಳು ಹೆದರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸಿಗರಿಗೆ ಮೋದಿ ಎಂಬ ಸಿಂಹದ ಭಯ ಶುರುವಾಗಿದೆ ಎಂದು ಸುಧೀರ್ ತಿಳಿಸಿದ್ದಾರೆ.
2012ರಿಂದ 2019ರವರೆಗೆ ಅವರದೇ ಸರ್ಕಾರ ಇತ್ತು ಒಂದು ಬಾರಿ ಅವರು ಸಹ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ಗೆ ಆಯ್ಕೆ ಆಗಿದ್ದರು. ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನು? ರಾಜ್ಯ ಮಟ್ಟದಲ್ಲಿ ಪ್ರಭಾವಿಗಳಾಗಿರುವ ಗಾಯತ್ರಿ ಶಾಂತೇಗೌಡರು ಅನುದಾನ ತರುವಲ್ಲಿ ಎಷ್ಟು ಪ್ರಯತ್ನ ಪಟ್ಟಿದ್ದಾರೆ. 2014 ರಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ಮಾಜಿ ಶಾಸಕರಾದ ಸಿ.ಟಿ.ರವಿಯವರ ನೇತೃತ್ವದಲ್ಲಿ ಅಭಿವೃದ್ದಿಗೆ ವಿಶೇಷ ಅನುದಾನ ಕೋರಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯವರ ಬಳಿಗೆ ನಿಯೋಗ ಹೋಗಿದ್ದು ನಿಯೋಗದ ಕಳಕಳಿಯ ಮನವಿಗೆ ಬಿಡಿಕಾಸಿನ ಕಿಮ್ಮತ್ತನ್ನು ನೀಡಲಿಲ್ಲ, ಆ ಸಮಯದಲ್ಲಿ ತಾವು ಕಾವೇರಿ ನಿವಾಸದಲ್ಲಿ ಇದ್ದರು ನಿಯೋಗದೊಂದಿಗೆ ಬಾರದೇ ಈ ಕ್ಷೇತ್ರಕ್ಕೆ ಅವಮಾನ ಮಾಡಿದ್ದೀರಿ ಎಂದು ದೂರಿದರು.
ಮದುವೆಯಾದ ತಕ್ಷಣ ಮಕ್ಕಳಾಗಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ, ಮದುವೆಯಾಗುವುದು ಅದಕ್ಕೋಸ್ಕರವೇ ಎಂಬುದು ನಿಮ್ಮ ಮಾತಿನ ಅರ್ಥವೇ? ಹಿರಿಯರು ಮದುವೆ ಮಾಡುವುದು ಜವಾಬ್ದಾರಿಯಿಂದ ಸಂಸಾರ ಮಾಡಲಿ ಎಂಬುವುದಾಗಿದೆ. ಈಗ ಅಂತಹ ಜವಾಬ್ದಾರಿಯನ್ನು ಕಾಂಗ್ರೆಸಿಗರು ಮರೆತಿದ್ದಾರೆ ಎಂಬುದು ಅವರ ಹೇಳಿಕೆ ಸಾಬೀತು ಮಾಡಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲೆಗೆ ನಮ್ಮ ನಾಯಕರಾದ ಸಿ.ಟಿ.ರವಿಯವರು ಸಾವಿರಾರು ಕೋಟಿ ರೂಗಳ ಅನುದಾನವನ್ನು ತಂದು ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮೆಡಿಕಲ್ ಕಾಲೇಜು, ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೆಂದ್ರೀಯ ವಿದ್ಯಾಲಯ, ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವುದು, ಹೊಸ ಕಾಲೇಜುಗಳ ಮಂಜೂರಾತಿ ಸೇರಿದಂತೆ ಕಣ್ಣಿಗೆ ಕಾಣುವಂತ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ?
ಮಾಜಿ ಸಚಿವರು ಮನೆ ಕಟ್ಟಿ ಸುಮಾರು ೧೫ ವರ್ಷಗಳೇ ಆಗಿದೆ, ಈಗ ಆ ವಿಚಾರ ಚರ್ಚೆ ಮಾಡುತ್ತಿರುವುದು ಹಾಸ್ಯಾಸ್ಪದ. ಸಾರ್ವಜನಿಕವಾಗಿ ನಿಮ್ಮ ಪಕ್ಷದ ಈಗಿನ ಶಾಸಕರು ಹೊಸ ಮನೆಕಟ್ಟುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಅ ವಿಚಾರವನ್ನು ಅದೆಲ್ಲೋ ಮುನ್ನೆಲೆಗೆ ಬರಲಿ ಎಂಬ ಉದ್ದೇಶ ಕಾಣುತ್ತಿದೆ. ಹಾಗಾದರೇ ಪ್ರಜಾಪ್ರತಿನಿಧಿಗಳಾದವರು ಮನೆ ಕಟ್ಟಿ ವಾಸ ಮಾಡಬಾರದೇ? ಹಾಗಾದರೇ ತಾವೆಲ್ಲಿ ವಾಸ ಮಾಡುತ್ತಿದ್ದಿರಿ?
ವೈಯಕ್ತಿಕ ಹೇಳಿಕೆಗಳಿಗೆ ಪ್ರತಿಕ್ರಿಯುಸುವ ಆಸಕ್ತಿ ಇಲ್ಲದಿದ್ದರು ನಿಮ್ಮ ವೈಯಕ್ತಿಕ ಟೀಕೆಗೆ ಅನಿವಾರ್ಯವಾಗಿ ಈ ಪ್ರತಿಕ್ರಿಯಿಸುತ್ತಿದ್ದೇವೆ. ಇದು ದೇಶದ ಚುನಾವಣೆ, ಅಭಿವೃದ್ಧಿ ಆಧಾರಿತ ಚರ್ಚೆ ಆಗಬೇಕು. ವೈಯಕ್ತಿಕ ಹೆಳಿಕೆಗಳನ್ನು ನೀಡುತ್ತಾ ಜನರ ಗಮನವನ್ನು ಬೇರೆಡೆ ಸೆಳೆಯುವ ವ್ಯರ್ಥ ಪ್ರಯತ್ನ ಮಾಡಬೇಡಿ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮಭಕ್ತರ ಮೇಲೆ ನಡೆದಿರುವ ಘಟನೆಯನ್ನು ಬಿಜೆಪಿ ಖಂಡಿಸುತ್ತದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಒತ್ತಾಯಿಸುತ್ತದೆ.