ಚಿಕ್ಕಮಗಳೂರು, ಏ. 1 : ಯುವತಿಗೆ ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ಪೋಷಕರು ಅಡ್ಡಿ ಮಾಡಿ, ಹುಡುಗಿಯನ್ನು ಅಜ್ಞಾತ ಸ್ಥಳವೊಂದರಲ್ಲಿ ಕೂಡಿ ಹಾಕಿದಾಗ ಸಿನಿಮಾ ಶೈಲಿಯಲ್ಲಿ ಮನಮೆಚ್ಚಿದ ಹುಡುಗಿಯನ್ನು ಪ್ರೇಮಿಯೊಬ್ಬ ಕರೆದುಕೊಂಡು ಬಂದು ದೇವಸ್ಥಾನದಲ್ಲಿ ಮದುವೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಫಟಾಪಟ್ ಮದುವೆ ಕಥೆ. ಪಂಚೆ ಧರಿಸಿ ಮಿರಮಿರ ಮಿಂಚುತ್ತಿರುವ ವರನ ಹೆಸರು ಯೋಗಾನಂದ್, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದವನು.
ವರನ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ವಧು ಚಂದನ. ಕಬ್ಳಿ ಪಕ್ಕದ ಜಿ. ಕೊಪ್ಪಲು ಗ್ರಾಮದ ಯುವತಿ. ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಯೋಗಾನಂದ್ ಸೀನಿಯರ್ ಆಗಿದ್ದರೆ ಚಂದನ ಜೂನಿಯರ್. ಹೀಗಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಕಳೆದ ಎರಡು ವರ್ಷದ ಹಿಂದೆ ಯೋಗನಾಂದ್ ಪದವಿ ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಅಂತಮ ವರ್ಷದ ಬಿಕಾಂನಲ್ಲಿ ಚಂದನ ಓದುತ್ತಿದ್ದಾಳೆ. ಆದರೂ ಇಬ್ಬರ ನಡುವಿನ ಪ್ರೀತಿ ಮಾಸಿರಲಿಲ್ಲ, ಆ ಪ್ರೇಮ ಮತ್ತಷ್ಟು ಗಟ್ಟಿಯಾಗಿದೆ. ಹೇಗೋ ಈ ವಿಚಾರ ಹುಡುಗಿಯ ಮನೆಯವರಿಗೆ ತಿಳಿದಿದೆ.
ಅಷ್ಟರಲ್ಲಾಗಲೇ ಬೇರೊಬ್ಬ ಹುಡುಗನ ಜೊತೆ ಮದುವೆ ಮಾಡಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಅಲ್ಲದೇ ಹುಡುಗಿಯನ್ನು ನಿಗೂಢವಾದ ಸ್ಥಳದಲ್ಲಿ ಇಟ್ಟಿದರಂತೆ. ಹೀಗಾಗಿ ಅದೇ ಸ್ಥಳಕ್ಕೆ ಹೋಗಿ ತನ್ನ ಪ್ರಿಯತಮೆಯನ್ನು ಸಿನಿಮೀಯ ಶೈಲಿಯಲ್ಲಿ ಕರೆದುಕೊಂಡ ಬಂದಿರುವ ಯೋಗನಾಂದ್, ದೇವಸ್ಥಾನದಲ್ಲಿ ಫಟಾಫಟ್ ಮದುವೆಯಾಗಿದ್ದಾನೆ.
ಇವರಿಬ್ಬರು ಒಂದಾಗಿರುವ ವಿಚಾರ ಕೇಳಿ ಸಹಜವಾಗಿಯೇ ಹುಡುಗಿ ಮನೆಯವರು ಜೋಡಿಯ ಹುಡುಕಾಟ ನಡೆಸಿದ್ದಾರೆ. ಜೊತೆಗೆ ವಧು-ವರರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವ ಜೋಡಿ ಆರೋಪಿಸಿದ್ದಾರೆ. ಹೀಗಾಗಿ ನಮಗೆ ಜೀವ ರಕ್ಷಣೆ ಬೇಕು ಅಂತಾ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವಜೋಡಿ, ನಾವಿಬ್ಬರು ಪರಸ್ಪರ ಪ್ರೀತಿಸಿ, ಯಾವುದೇ ಒತ್ತಡವಿಲ್ಲದೇ ಇಷ್ಟಪಟ್ಟು ಮದುವೆಯಾಗುತ್ತಿದ್ದೇವೆ, ನಮಗೇನಾದರೂ ಹೆಚ್ಚು ಕಡಿಮೆ ಆದರೆ ನಮ್ಮ ಮಾವಂದಿರೇ ಕಾರಣ ಎಂದು ಚಂದನ ಆರೋಪಿಸಿದ್ದಾರೆ.
ನವಜೋಡಿ ನಾವು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ, ಯಾರ ಒತ್ತಡದಿಂದಲೂ ಮದುವೆಯಾಗಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಖುಷಿಯಿಂದ ಜೀವನ ನಡೆಸುತ್ತೇವೆಂದು ಮನವಿ ಮಾಡಿದ್ದಾರೆ.
ನಮಗೆ ತರಾತುರಿಯಲ್ಲಿ ಮದುವೆಯಾಗುವ ಆಸೆ ಇರಲಿಲ್ಲ, ಆದರೆ ಮನೆಯವರ ವಿರೋಧ, ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ತುರ್ತಾಗಿ ಮದುವೆಯಾಗಬೇಕಾಗಿದೆ ಅಂತಾ ಈ ಜೋಡಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.
ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಅಂತಾ ಪೋಷಕರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಜೋಡಿ, ಸೂಕ್ತ ರಕ್ಷಣೆ ನೀಡುವಂತೆ ಕೋರಿಕೊಂಡಿದೆ. ಅದೇನೇ ಇರಲಿ, ಹೆತ್ತವರಿಗೂ ತಮ್ಮ ಮಗಳ ಮದುವೆ ಬಗ್ಗೆ ಒಂದಷ್ಟು ಕನಸು-ಕನವರಿಕೆಗಳಿರುವುದು ಸಹಜ. ಆದರೆ ಮಗಳು ಒಂದು ಹೆಜ್ಜೆ ಮುಂದೆ ಹೋದ ಮೇಲೆ ಆಗಿದ್ದು ಆಗೋಯ್ತು ಅಂತಾ ಕ್ಷಮಿಸಿ ಮನೆ ತುಂಬಿಸಿಕೊಳ್ಳುವುದು ಉತ್ತಮ.