ಚಿಕ್ಕಮಗಳೂರು:ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಕಾರ್ಮಿಕರು ದೊಡ್ಡ ಎಸ್ಟೇಟ್ಗಳಲ್ಲಿ ಬೀಡು ಬಿಟ್ಟಿದ್ದಾರೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಫಿ ಕಟಾವಿನ ಸಂದರ್ಭ ಮಲೆನಾಡಿಗೆ ಕೆಲಸ ಅರಸಿ ಬರುತ್ತಿದ್ದ ಕಾರ್ಮಿಕರು, ಈ ಬಾರಿ ಆಗಸ್ಟ್ ತಿಂಗಳಿಂದಲೇ ತೋಟಗಳಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಅಸ್ಸಾಂ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ತೋಟಗಳಲ್ಲಿ ಕೆಲಸ ಚುರುಕುಗೊಂಡಿರುವ ಜತೆಗೆ ಬೆಳೆಗಾರರಿಗೆ ಕಾರ್ಮಿಕರ ಕೊರತೆ ನೀಗಿದಂತಾಗಿದೆ. ಕಳೆದ ನಾಲ್ಕು, ಐದು ವರ್ಷಗಳ ಹಿಂದೆ ಮಲೆನಾಡು ಭಾಗದ ಕಾಫಿ ತೋಟಗಳಿಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಕೂಲಿ ಕೆಲಸ ಅರಸಿ ಬರುತ್ತಿದ್ದ ಕಾರ್ಮಿಕರು ಕೆಲಸ ಮುಗಿದ ನಂತರ ತಮ್ಮ ರಾಜ್ಯಗಳಿಗೆ ವಾಪಸಾಗುತ್ತಿದ್ದರು.ಹೆಚ್ಚು ಶ್ರಮವಹಿಸಿ ದುಡಿಯುವ ಅಸ್ಸಾಂ ಕಾರ್ಮಿಕರು, ಕಡಿಮೆ ಕೂಲಿಗೆ ಲಭ್ಯವಾಗುವುದು ಇಲ್ಲಿನ ಬೆಳೆಗಾರರಿಗೆ ಅನುಕೂಲವಾಗಿದೆ. ಕಳೆದ 3 -4 ವರ್ಷಗಳ ಹಿಂದೆ ಕಾರ್ಮಿಕರ ಕೊರತೆಯಿಂದಾಗಿ ತೋಟದ ಕೆಲಸಗಳು ವಿಳಂಬವಾಗಿ ಕಾಫಿ ಕಟಾವಿಗೆ ತೊಂದರೆಯಾಗಿತ್ತು. ತೋಟಗಳಲ್ಲಿ ಕಾಫಿ ಕಟಾವು ಸಂದರ್ಭ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಎಲ್ಲ ತೋಟಗಳಲ್ಲಿ ಒಂದೇ ಸಮಯದಲ್ಲಿ ಕಾಫಿ ಕಟಾವು ಆರಂಭವಾಗುವುದರಿಂದ ಕಾರ್ಮಿಕರ ಕೊರತೆಯಿಂದಾಗಿ ತೋಟದ ಕೆಲಸ ವಿಳಂಬವಾಗುತ್ತಿದ್ದವು. ಈಗ ಅಸ್ಸಾಂ ಕಾರ್ಮಿಕರಿಂದಾಗಿ ತೋಟದ ಕೆಲಸ ಬಿರುಸಿನಿಂದ ಸಾಗುತ್ತಿವೆ.
ಅಸ್ಸಾಂ ಕಾರ್ಮಿಕರಿಂದ ನಮಗೆ ಕೆಲಸಕ್ಕೆ ಅನುಕೂಲವಾಗಿದೆ. ತೋಟದ ಲೈನ್ ಗಳಲ್ಲೇ ಉಳಿಯುವುದರಿಂದ ಕಾರ್ಮಿಕರನ್ನು ಹೊರಭಾಗದಿಂದ ಕರೆ ತರುವ ಸಮಸ್ಯೆ ಬಗೆಹರಿದಿದೆ. ಶೇ. 70 ಕಾರ್ಮಿಕರ ಕೊರತೆ ನೀಗಿದಂತಾಗಿದೆ. ಅಸ್ಸಾಂನಿಂದ ಬರುವ ಕಾರ್ಮಿಕರಿಂದ ಸೂಕ್ತ ದಾಖಲೆ ಪಡೆದು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಾಫಿ ಬೆಳೆಗಾರರ ಸಂಘದಿಂದ ಬೆಳೆಗಾರರಿಗೆ ಮಾಹಿತಿ ನೀಡಿದ್ದೇವೆ. ಅಸ್ಸಾಂ ಕಾರ್ಮಿಕರ ಬಗ್ಗೆ ಮಾಹಿತಿ ಕೇಳಿ ಪೊಲೀಸ್ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ.