ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಸಲಾಗಿದೆ.
ಕಳೆದ 2 ದಿನಗಳಿಂದ ಎದುರಾದ ತಾಂತ್ರಿಕ ಸವಾಲುಗಳ ಮಧ್ಯೆ ಇಂದು ಸಂಜೆ ಗೇಟ್ ಅಳವಡಿಕೆಗೆ ಇಡೀ ತಂಡ ಸಜ್ಜಾಗಿತ್ತು. ಸಚಿವ ಶಿವರಾಜ ತಂಗಡಗಿ ಅವರು ಪೂಜೆ ಮಾಡಿ ಗೇಟ್ ಅಳವಡಿಕೆಗೆ ಚಾಲನೆ ನೀಡಿದರು. ಗೇಟ್ ಯಶಸ್ವಿಯಾಗಿ ಇಳಿಯಲಿ ಎಂದು ಸ್ಥಳೀಯರು, ಜನಪ್ರತಿನಿಧಿಗಳು ಪ್ರಾರ್ಥನೆ ಸಲ್ಲಿಸಿದರು.
ಭಗವಂತನ ಮೇಲೆ ಭಾರ ಹಾಕಿದ್ದ ಡ್ಯಾಂ ತಜ್ಞ ಕನ್ಹಯ್ಯ ಅವರ ತಂಡ ಟಿಬಿ ಡ್ಯಾಂ ಸ್ಟಾಪ್ ಲಾಗ್ ಅಳವಡಿಸುವ ಕಾರ್ಯ ಆರಂಭಿಸಿತ್ತು. ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಇದೀಗ ಮೊದಲ ಸ್ಟಾಪ್ ಲಾಗ್ ಅಳವಡಿಸಲಾಗಿದೆ. 60 ಅಡಿ ಅಗಲ 4 ಅಡಿ ಉದ್ದದ ಮೊದಲ ಸ್ಟಾಪ್ ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು, ಇದು 25 ಟಿಎಂಸಿ ನೀರು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಡ್ಯಾಂ ತಂತ್ರಜ್ಞರ ತಂಡ ಇನ್ನುಳಿದ ಸ್ಟಾಪ್ ಲಾಗ್ ಅನ್ನು ನಾಳೆ ಬೆಳಿಗ್ಗೆಯಿಂದ ಹಂತ ಹಂತವಾಗಿ ಅಳವಡಿಕೆ ಮಾಡಲು ಮುಂದಾಗಿದೆ. ಬಳ್ಳಾರಿಯ ಜಿಂದಾಲ್, ಹೊಸಪೇಟೆ ನಾರಾಯಣ ಇಂಜಿನಿಯರ್ಸ್ ಹಾಗೂ ಕೊಪ್ಪಳದ ಹಿಂದೂಸ್ತಾನ ಸ್ಟೀಲ್ಸ್ ವರ್ಕ್ಸ್ನಿಂದ ಈ ಸ್ಟಾಪ್ ಲಾಗ್ ತಯಾರಿಸಲಾಗಿತ್ತು.
80ಕ್ಕೂ ಹೆಚ್ಚು ಎಂಜಿನಿಯರ್ಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಮೊದಲ ಯಶಸ್ಸು ಸಿಕ್ಕಿದೆ. ತುಂಗಭದ್ರಾ ಜಲಾಶಯದ 19 ಗೇಟ್ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿ ಆಗಿರೋದಕ್ಕೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.