ಕಾರವಾರ: ಸಚಿವರೂ ಆಗಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜನತೆಗೆ ಈ ಬಗ್ಗೆ ಅರಿವಿದ್ದು ಜನರೇ ಈ ಕುರಿತು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಗೋವಾ ಶಾಸಕ ಉಲ್ಲಾಸ ತುವೇಕರ ಹೇಳಿದರು.
ಯಲ್ಲಾಪುರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗೋವಾದಿಂದ ಇಲ್ಲಿಗೆ ಪಕ್ಷದ ಸಂಘಟನಾ ಕಾರ್ಯಕ್ಕೆ ಬಂದಿದ್ದು ನಿಜ. ಆದರೆ ಕ್ಷೇತ್ರದಲ್ಲಿ ಶಾಸಕರು ಮಾಡಿರುವ ಕೆಲಸಗಳೇ ಅವರಿಗೆ ಜಯದತ್ತ ಸಾಗಿಸುವುದು ಖಚಿತವಾಗಿರುವುದರಿಂದ ನಮ್ಮ ಕೆಲಸ ಸುಲಭವಾಗಿದೆ. ಕೇವಲ ಗೆಲುವಿನ ಅಂತರವನ್ನು ಹೆಚ್ಚಿಸುವತ್ತ ನಮ್ಮೆಲ್ಲ ಕಾರ್ಯಕರ್ತರ ಗಮನವಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ಸುಳ್ಳು ಭರವಸೆಯ ಗ್ಯಾರಂಟಿಕಾರ್ಡ್ ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡುತ್ತಿದೆ. ಯಾವುದೇ ದಾರಿಯಿಲ್ಲದೆ, ಹತಾಶೆಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಗೋವಾದ ಜಿಲ್ಲಾ ಕಾರ್ಯದರ್ಶಿ ಪರೇಶ್ ನಾಯ್ಕ, ಪ್ರಮುಖರಾದ ರಾಮು ನಾಯ್ಕ ಇದ್ದರು.