ಕಾರವಾರ: ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಚಿತ್ರ ಪ್ರದರ್ಶಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಕಾರವಾರದ ಅರ್ಜುನ್ ಥಿಯೇಟರ್ ಬಳಿ ಪ್ರತಿಭಟನೆ ನಡೆಸಿದೆ.
ಶುಕ್ರವಾರ ಅರ್ಜುನ್ ಥಿಯೇಟರ್ ನಲ್ಲಿ ಧೋಂಡಿ ಚಂಪ್ಯಾ ಏಕ್ ಪ್ರೇಮ್ ಕಥಾ ಎಂಬ ಮರಾಠಿ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿತ್ತು. ಅಲ್ಲದೇ ಈ ಸಿನಿಮಾಕ್ಕೆ ಸಂಬಂಧಿಸಿದ ಬೃಹತ್ ಫ್ಲೆಕ್ಸ್, ಪೋಸ್ಟರ್ ಗಳನ್ನ ಥಿಯೇಟರ್ ಮೇಲೆ ಅಳವಡಿಸಿ, ಕಾಂತಾರಾ ಸಿನಿಮಾದ ಪೋಸ್ಟರನ್ನ ಥಿಯೇಟರ್ ನ ಹೊರ ಭಾಗದಲ್ಲಿ ಕೆಳಕ್ಕೆ ಇಡಲಾಗಿತ್ತು.
ಇದರಿಂದಾಗಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು, ಥಿಯೇಟರ್ ಎದುರು ಜಮಾಯಿಸಿ ಥಿಯೇಟರ್ ನ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು. ಥಿಯೇಟರ್ ನಲ್ಲಿ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡದೆ ಮರಾಠಿ ಭಾಷೆ ಬೆಳೆಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ಮರಾಠಿ ಸಿನಿಮಾದ ಫ್ಲೆಕ್ಸ್ ಗೆ ಮಸಿ ಬಳಿದರು. ಕೂಡಲೇ ಫ್ಲೆಕ್ಸ್ ಗಳನ್ನ ತೆರವು ಮಾಡಲೂ ಒತ್ತಾಯಿಸಿದರು. ಕರವೇ ಕಾರ್ಯಕರ್ತರ ಆಗ್ರಹದ ಬಳಿಕ ಥಿಯೇಟರ್ ನ ಸಿಬ್ಬಂದಿ ಮರಾಠಿ ಸಿನಿಮಾದ ಪೋಸ್ಟರ್ ತೆರವುಗೊಳಿಸಿದ್ದಾರೆ. ಇನ್ನು ಮರಾಠಿ ಸಿನಿಮಾ ಪ್ರದರ್ಶನ ಮಾಡದಂತೆಯೂ ಕರವೇ ಕಾರ್ಯಕರ್ತರು ಆಗ್ರಹಿಸಿದ್ದು, ಈ ಬಗ್ಗೆ ಥಿಯೇಟರ್ ಸಿಬ್ಬಂದಿ ಮಾಲಕರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.